ADVERTISEMENT

ರಾಮಚರಿತ ಮಾನಸ ವಿವಾದ: ಮೌರ್ಯ ಬೆಂಬಲಿಸಿ ಪ್ರತಿಭಟನಾ ರ‍್ಯಾಲಿ ನಾಳೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2023, 12:39 IST
Last Updated 31 ಜನವರಿ 2023, 12:39 IST
ಸ್ವಾಮಿ ಪ್ರಸಾದ್‌ ಮೌರ್ಯ
ಸ್ವಾಮಿ ಪ್ರಸಾದ್‌ ಮೌರ್ಯ   

ಲಖನೌ: ಹಿಂದೂ ಧಾರ್ಮಿಕ ಕೃತಿ ‘ರಾಮಚರಿತ ಮಾನಸ’ ಕುರಿತು ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಸ್ವಾಮಿ ಪ್ರಸಾದ್‌ ಮೌರ್ಯ ಅವರು ನೀಡಿದ್ದ ಹೇಳಿಕೆ ಈಗ ರಾಜಕೀಯ ತಿರುವು ಪಡೆದಿದೆ. ಪರಿಶಿಷ್ಟ ಜಾತಿ(ಎಸ್‌ಸಿ) ಮತ್ತು ಇತರ ಹಿಂದುಳಿದ ವರ್ಗಗಳ(ಒಬಿಸಿ) ಕೆಲ ಸಂಘಟನೆಗಳು ಮೌರ್ಯ ಅವರಿಗೆ ಬೆಂಬಲ ಸೂಚಿಸಿವೆ. ಜೊತೆಗೆ, ಅವರನ್ನು ಬೆಂಬಲಿಸಿ ಲಖನೌನಲ್ಲಿ ಬುಧವಾರ ಪಾದಯಾತ್ರೆ ನಡೆಸುವುದಾಗಿಯೂ ಹೇಳಿವೆ.

ಹಿಂದುಳಿದ ವರ್ಗಗಳ ಕುರಿತು ಕೃತಿಯಲ್ಲಿ ನೀಡಲಾಗಿರುವ ಆಕ್ಷೇಪಾರ್ಹ ಉಲ್ಲೇಖಗಳ ವಿರುದ್ಧವೂ ಧ್ವನಿ ಎತ್ತುವುದಾಗಿ ಸಂಘಟನೆಗಳು ತಿಳಿಸಿವೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಎಸ್‌ಪಿ ಕಚೇರಿ ಎದುರು ಬೃಹತ್‌ ಭಿತ್ತಿಪತ್ರವನ್ನು ಪ್ರದರ್ಶಿಲಾಗಿದೆ. ‘ನಾವು ಶೂದ್ರರು ಎಂದು ಗರ್ವದಿಂದ ಹೇಳಿ’ ಎಂದು ಅದರಲ್ಲಿ ಬರೆಯಲಾಗಿದೆ. ಮುಂಬೈನ ಅಖಿಲ ಭಾರತ ಕ್ಷತ್ರಿಯ ಕುರ್ಮಿ ಮಹಾಸಭಾ ಈ ಭಿತ್ತಿಪತ್ರ ಪ್ರದರ್ಶಿಸಿದೆ.

‘ಲಖನೌನ ಪರಿವರ್ತನ್‌ ಚೌಕ್‌ನಿಂದ ಅಂಬೇಡ್ಕರ್‌ ಪ್ರತಿಮೆವರೆಗೆ ಪ್ರತಿಭಟನಾ ರ‍್ಯಾಲಿ ನಡೆಯಲಿದೆ. ಎಸ್‌ಸಿ ಮತ್ತು ಒಬಿಸಿಯ ಹಲವು ನಾಯಕರು ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹಲವು ನಾಯರಿಗೆ ನಾವೇ ಆಮಂತ್ರಣ ನೀಡಿದ್ದೇವೆ’ ಎಂದು ರ‍್ಯಾಲಿ ಆಯೋಜಕ ಮನೋಜ್‌ ಪಾಸ್ವಾನ್‌ ತಿಳಿಸಿದ್ದಾರೆ.

ADVERTISEMENT

ಮೌರ್ಯ ಅವರನ್ನು ಬೆಂಬಲಿಸಿ ಅಖಿಲ ಭಾರತ ಒಬಿಸಿ ಮಹಾಸಭಾ ಸದಸ್ಯರು ಭಾನುವಾರವೂ ಪ್ರತಿಭಟನೆ ನಡೆಸಿದ್ದರು. ರಾಮಚರಿತ ಮಾನಸ ಕೃತಿಯನ್ನು ಸುಟ್ಟುಹಾಕಿದ ಪ್ರಕರಣದಲ್ಲಿ ಮೌರ್ಯ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ರಾಮಚರಿತ ಮಾನಸದ ಕೆಲ ಭಾಗಗಳನ್ನು ಮೌರ್ಯ ಅವರು ದಲಿತ, ಮಹಿಳಾ ವಿರೋಧಿ ಎಂದು ಕರೆದ್ದರು. ಈ ಭಾಗವನ್ನು ಓದುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಎಸ್‌ಪಿ ಅಧ್ಯಕ್ಷ ಅಖಿಲೇಶ್‌ ಅವರು ಇತ್ತೀಚೆಗಷ್ಟೇ ಸೂಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.