ಪಟ್ನಾ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗ್ಗೆ ಬಿಹಾರ ವಿಧಾನಸಭೆಯಲ್ಲಿ ಮುಕ್ತ ಚರ್ಚೆ ನಡೆಸಲು ಸಿದ್ದವಿರುವುದಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸಿದ್ದಾರೆ. ಆರ್ಜೆಡಿ ಮತ್ತು ಎಡ ಪಕ್ಷಗಳು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತೀವ್ರವಾಗಿ ವಿರೋಧಿಸುತ್ತಿರುವ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ಚರ್ಚೆಗೆ ಈ ಆಹ್ವಾನ ನೀಡಿದ್ದಾರೆ.
ಇದೇ ವೇಳೆ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ಆರ್ಸಿ) ಬಗ್ಗೆ ಮಾತನಾಡಿರುವ ಅವರು, ‘ಸಿಎಎ ಬಗ್ಗೆ ಮುಕ್ತ ಚರ್ಚೆಗಳಾಗಬೇಕಿದೆ. ಜನರು ಬಯಸಿದರೆ ವಿಧಾನಸಭೆಯಲ್ಲಿಯೇ ಚರ್ಚಿಸಿ ಪುನರ್ವಿಮರ್ಶೆ ಮಾಡಲು ತಮ್ಮ ಪಕ್ಷ ಸಿದ್ಧವಿದೆ. ಇನ್ನು ಬಿಹಾರದಲ್ಲಿ ಎನ್ಆರ್ಸಿ ಬಗ್ಗೆ ಪ್ರಶ್ನೆಯೇ ಏಳುವುದಿಲ್ಲ. ಕಾರಣ, ಅದನ್ನು ಜಾರಿಗೊಳಿಸುವ ಯಾವುದೇ ಆಲೋಚನೆ ಇಲ್ಲ,’ ಎಂದು ನಿತೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಎನ್ಡಿಎ ಸದಸ್ಯ ಪಕ್ಷವಾಗಿರುವ ಜೆಡಿ(ಯು) ಎನ್ಆರ್ಸಿ ವಿಚಾರವಾಗಿ ಬಿಜೆಪಿ ವಿರೋಧಿ ನಿಲುವು ತಳೆದಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಿಎಎ ವಿಚಾರವಾಗಿ ಸದನದಲ್ಲಿ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದ ಜೆಡಿ(ಯು) ತನ್ನ ನಿಲುವು ಬದಲಿಸಿದ್ದು ಕುತೂಹಲಕ್ಕೆ ಕಾರಣವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.