ನವದೆಹಲಿ: ಉತ್ತರ ಪ್ರದೇಶದ ಖುಷಿನಗರ್ ವಿಮಾನ ನಿಲ್ದಾಣವನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಘೋಷಿಸಿ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ.
ಈ ಮೂಲಕ ಖುಷಿನಗರ್ ವಿಮಾನ ನಿಲ್ದಾಣಕ್ಕೆ ಸಮೀಪವಿರುವ ಬೌದ್ಧ ಧರ್ಮದ ಪ್ರವಾಸಿ ತಾಣಗಳಿಗೆ ಸೂಕ್ತ ಸಂಪರ್ಕ ವ್ಯವಸ್ಥೆ ಸಿಗಲಿದೆ.
‘ಖುಷಿನಗರ್ ಬೌದ್ಧ ಧರ್ಮದ ಪ್ರವಾಸಿ ತಾಣದ ಕೇಂದ್ರಬಿಂದುವಾಗಿದ್ದು, ಲುಂಬಿನಿ, ಶ್ರಾವಸ್ತಿ, ಕಪಿಲವಾಸ್ತುವಿನಲ್ಲಿ ಹಲುವ ಪ್ರವಾಸಿ ತಾಣಗಳಿವೆ. ಅಂತರರಾಷ್ಟ್ರೀಯ ಗುಣಮಟ್ಟದ ಯಾವುದೇ ವಿಮಾನ ನಿಲ್ದಾಣಗಳು ಇಲ್ಲಿ ಇರಲಿಲ್ಲ. ಖುಷಿನಗರ್ ವಿಮಾನ ನಿಲ್ದಾಣದಲ್ಲಿ 3 ಕಿ.ಮೀ. ರನ್ವೇ ಇದ್ದು, ಏರ್ಬಸ್ನಂಥ ಬೃಹತ್ ವಿಮಾನಗಳೂ ಇಳಿಯಬಹುದು’ ಎಂದು ಸಚಿವ ಸಂಪುಟ ಸಭೆಯ ಬಳಿಕ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಮಾಹಿತಿ ನೀಡಿದರು.
ಗೌತಮ ಬುದ್ಧ ಖುಷಿನಗರ್ನಲ್ಲಿ ಮಹಾಪರಿನಿರ್ವಾಣ ಹೊಂದಿದ್ದರು. ಥಾಯ್ಲೆಂಡ್, ಕಾಂಬೊಡಿಯಾ, ಜಪಾನ್, ಮ್ಯಾನ್ಮಾರ್ನಿಂದ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಖುಷಿನಗರಕ್ಕೆ ಆಗಮಿಸುತ್ತಾರೆ. ಇಲ್ಲಿಗೆ ನೇರಸಂಪರ್ಕ ವ್ಯವಸ್ಥೆ ಕಲ್ಪಿಸಲು ಪ್ರವಾಸಿಗರು ಹಲವು ವರ್ಷಗಳಿಂದ ಬೇಡಿಕೆ ಇರಿಸಿದ್ದರು ಕೇಂದ್ರ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.