ADVERTISEMENT

2019- 20ರ ಅವಧಿಯಲ್ಲಿ ದೇಶದಲ್ಲುಂಟಾದ ವಿಪತ್ತುಗಳಿಗೆ ಬಲಿಯಾದವರ ಸಂಖ್ಯೆ 2,422 

ಶೆಮಿಜ್‌ ಜಾಯ್‌
Published 5 ಮಾರ್ಚ್ 2020, 13:53 IST
Last Updated 5 ಮಾರ್ಚ್ 2020, 13:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದಲ್ಲಿ ಸಂಭವಿಸಿದ ಪ್ರಾಕೃತಿಕ ವಿಪತ್ತುಗಳಿಗೆ ಸಿಲುಕಿ 2,400ಕ್ಕಿಂತ ಹೆಚ್ಚು ಮಂದಿ ಪ್ರಾಣಕಳೆದುಕೊಂಡಿದ್ದಾರೆ .71,000 ಜಾನುವಾರುಗಳು ಸಾವಿಗೀಡಾಗಿದ್ದು, 114 ಲಕ್ಷ ಹೆಕ್ಟೇರ್‌ಗಿಂತ ಹೆಚ್ಚು ಕೃಷಿ ಭೂಮಿ ನಾಶವಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.

2019 ಏಪ್ರಿಲ್ 1- 2020 ಫೆಬ್ರುವರಿ 20ರವರೆಗಿನ ಅಂಕಿ ಅಂಶಗಳ ಪ್ರಕಾರ 7.44 ಲಕ್ಷಕಿಂತ ಹೆಚ್ಚು ಮನೆಗಳು ಈ ವಿಕೋಪದಿಂದ ಹಾನಿಗೀಡಾಗಿವೆ.

ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಒಟ್ಟು 2,422 ಮಂದಿ ಸಾವಿಗೀಡಾಗಿದ್ದಾರೆ. ಮಧ್ಯಪ್ರದೇಶದಲ್ಲಿ ಅತೀ ಹೆಚ್ಚು ಅಂದರೆ 674 ಮಂದಿ ಜೀವ ಕಳೆದುಕೊಂಡಿದ್ದು ಮಹಾರಾಷ್ಟ್ರದಲ್ಲಿ 253 ಮಂದಿ ಸಾವಿಗೀಡಾಗಿದ್ದಾರೆ. ಕರ್ನಾಟಕದಲ್ಲಿ 91 ಮಂದಿ ಪ್ರಾಣಕಳೆದುಕೊಂಡಿದ್ದಾರೆ.

ADVERTISEMENT

ಈ ಪೈಕಿ ಬಂಗಾಳದಲ್ಲಿ 227, ಗುಜರಾತಿನಲ್ಲಿ 195, ಉತ್ತರ ಪ್ರದೇಶದಲ್ಲಿ 166 ಮತ್ತು ಬಿಹಾರದಲ್ಲಿ 133 ಮಂದಿ ಸಾವಿಗೀಡಾಗಿದ್ದಾರೆ.

ಮಧ್ಯಪ್ರದೇಶದಲ್ಲಿ60. 47 ಲಕ್ಷ ಹೆಕ್ಟೇರ್, ರಾಜಸ್ಥಾನದಲ್ಲಿ 23.92 ಲಕ್ಷ ಹೆಕ್ಟೇರ್ ಮತ್ತು ಕರ್ನಾಟಕ 9.35 ಲಕ್ಷ ಹೆಕ್ಟೇರ್ ಕೃಷಿ ಭೂಮಿ ನಾಶವಾಗಿದೆ.

ಒಟ್ಟು 7.44 ಲಕ್ಷ ಮನೆಗಳಿಗೆ ಹಾನಿಯಾಗಿದೆ. ಅಸ್ಸಾಂನಲ್ಲಿ 1.40 ಲಕ್ಷ ,ಕರ್ನಾಟಕದಲ್ಲಿ 1.15 ಲಕ್ಷ ಮತ್ತು ಮಹಾರಾಷ್ಟ್ರದಲ್ಲಿ 1.09 ಲಕ್ಷ ಮನೆಗಳಿಗೆ ಹಾನಿಯಾಗಿದೆ ಎಂದು ಮಂಗಳವಾರ ಲೋಕಸಭೆಯಲ್ಲಿ ಸಲ್ಲಿಸಿದ ಅಂಕಿ ಅಂಶಗಳಲ್ಲಿ ಹೇಳಲಾಗಿದೆ. ದೇಶದಾದ್ಯಂತ 71,755 ಜಾನುವಾರುಗಳು ಸತ್ತಿದ್ದು, ಕರ್ನಾಟಕದಲ್ಲಿ 59,600 ಜಾನುವಾರುಗಳು ಸಾವಿಗೀಡಾಗಿವೆ.

2019- 20ರ ಅವಧಿಯಲ್ಲಿ ಕರ್ನಾಟಕ, ಕೇರಳ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ಸೇರಿದಂತೆ ಪ್ರವಾಹ ಪೀಡಿತ 14 ರಾಜ್ಯಗಳು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ನೆರವು ನೀಡುವಂತೆ ಮನವಿ ಸಲ್ಲಿಸಿವೆ. ಈ ಅವಧಿಯಲ್ಲಿ ಹಲವಾರು ರಾಜ್ಯಗಳಿಗೆ 5,239.67 ಕೋಟಿ ಹೆಚ್ಚುವರಿ ನೆರವು ನೀಡಲಾಗಿದೆ ಎಂದು ಗೃಹ ಸಚಿವಾಲಯದ ರಾಜ್ಯ ಸಚಿವ ನಿತ್ಯಾನಂದ ರಾಯ್ ಹೇಳಿದ್ದಾರೆ.

ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ 8 ರಾಜ್ಯಗಳಿಗೆ 14,108.58 ಕೋಟಿ ನೀಡಲಾಗಿದೆ. ಇದರಲ್ಲಿ ಮಹಾರಾಷ್ಟ್ರಕ್ಕೆ 3,431.22 ಕೋಟಿ , ಕರ್ನಾಟಕಕ್ಕೆ ₹3,196.80 ಕೋಟಿ, ಒಡಿಶಾ ರಾಜ್ಯಕ್ಕೆ ₹3114.46 ಕೋಟಿ ನೀಡಲಾಗಿದೆ. ಕೇಂದ್ರ ಸರ್ಕಾರವು ಎಲ್ಲ ರಾಜ್ಯಗಳ ವಿಪತ್ತು ಪರಿಹಾರ ನಿಧಿಗೆ ₹10,429.32 ಕೋಟಿ ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕಕ್ಕೆ 304 ಕೋಟಿ ಲಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.