ADVERTISEMENT

5 ತಿಂಗಳ ಮಗುವಿನ ಔಷಧಿ ಮೇಲಿನ ₹ 6 ಕೋಟಿ ಆಮದು ತೆರಿಗೆ ಮನ್ನಾ ಮಾಡಿದ ಕೇಂದ್ರ

ಪಿಟಿಐ
Published 11 ಫೆಬ್ರುವರಿ 2021, 7:51 IST
Last Updated 11 ಫೆಬ್ರುವರಿ 2021, 7:51 IST
ಚಿತ್ರ: teera_fights_sma ಇನ್‌ಸ್ಟಾಗ್ರಾಮ್ ಖಾತೆ
ಚಿತ್ರ: teera_fights_sma ಇನ್‌ಸ್ಟಾಗ್ರಾಮ್ ಖಾತೆ   

ಮುಂಬೈ: ಅಪರೂಪದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಐದು ತಿಂಗಳ ಮಗುವಿಗೆ ಬೇಕಾದ ಔಷಧಿ ಮೇಲಿನ ಆಮದು ಸುಂಕ ಮತ್ತು ಔಷಧಿಗಳ ಮೇಲಿನ ಜಿಎಸ್‌ಟಿ ₹ 6 ಕೋಟಿಯನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆ ಎಂದು ಬಿಜೆಪಿ ಮುಖಂಡ ದೇವೇಂದ್ರ ಫಡಣವಿಸ್ ಹೇಳಿದ್ದಾರೆ.

ಮುಂಬೈನ ಸಬರ್ಬನ್ ಆಸ್ಪತ್ರೆಗೆ ದಾಖಲಾಗಿರುವ ಟೀರಾ ಕಾಮತ್ ಎಂಬ ಮಗು ಬೆನ್ನುಮೂಳೆಯ ಸ್ನಾಯು ಕ್ಷೀಣತೆ (ಎಸ್‌ಎಂಎ) ಸಮಸ್ಯೆಯಿಂದ ಬಳಲುತ್ತಿದ್ದಾರೆ, ಈ ಆರೋಗ್ಯ ಸಮಸ್ಯೆ ನರಕೋಶಗಳ ಸಂಪೂರ್ಣ ಸ್ಥಗಿತಕ್ಕೆ ಕಾರಣವಾಗುವ ಮೂಲಕ ಸ್ನಾಯುವಿನ ಚಲನೆಯ ಮೇಲೆ ಸಂಪೂರ್ಣ ನಿಯಂತ್ರಣ ಕಳೆದುಕೊಳ್ಳುವಂತೆ ಮಾಡುತ್ತದೆ.

ದೇಹವನ್ನು ದುರ್ಬಲಗೊಳಿಸುವ ಅಪರೂಪದ ಕಾಯಿಲೆಯಿಂದ ತಮ್ಮ ಮಗು ಬಳಲುತ್ತಿರುವ ಬಗ್ಗೆ ಬಾಲಕಿ ಪೋಷಕರಾದ ಪ್ರಿಯಾಂಕಾ ಮತ್ತು ಮಿಹಿರ್ ಕಾಮತ್ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದರು. ಈ ಪೋಸ್ಟ್ ಇದೀಗ ನಿಧಿಸಂಗ್ರಹಕ್ಕೆ ಕಾರಣವಾಗುವ ಜೊತೆಗೆ ಕೇಂದ್ರ ಸರ್ಕಾರವು ಔಷಧಿಗಳ ಮೇಲಿನ ಆಮದು ಸುಂಕ ಮತ್ತು ಜಿಎಸ್‌ಟಿಯನ್ನು ಮನ್ನಾ ಮಾಡುವಂತೆ ಪ್ರೇರೇಪಿಸಿದೆ.

ADVERTISEMENT

ಎಸ್‌ಎಂಎ ಸಮಸ್ಯೆಗೆ ಚಿಕಿತ್ಸೆ ನೀಡಲು ಝೊಲ್ಗೆನ್ಸ್ಮಾ ಮತ್ತು ಇತರ ಔಷಧಗಳನ್ನು ಆಮದು ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ಶೇ. 23 ರಷ್ಟು ಆಮದು ಸುಂಕ ಮತ್ತು ಶೇ. 12 ಜಿಎಸ್ಟಿ ₹ 6 ಕೋಟಿ ಸೇರಿ ಒಟ್ಟು ವೆಚ್ಚ ₹16 ಕೋಟಿ ಆಗುತ್ತದೆ ಎಂದು ಬರೆದುಕೊಂಡಿದ್ದರು.

ಇದನ್ನು ಗಮನಿಸಿದ ಬಳಿಕ, ಆಮದು ಸುಂಕ ಮತ್ತು ಜಿಎಸ್‌ಟಿಯನ್ನು ಮನ್ನಾ ಮಾಡುವಂತೆ ಕೋರಿ ಫಡ್ನವೀಸ್ ಫೆಬ್ರವರಿ 1 ರಂದು ಕೇಂದ್ರಕ್ಕೆ ಪತ್ರ ಬರೆದಿದ್ದರು.

ಇದೀಗ, ಕೇಂದ್ರ ಸರ್ಕಾರ ತೆರಿಗೆ ಮನ್ನಾ ಮಾಡಿದ್ದು, "ಐದು ತಿಂಗಳ ಮಗು ಟೀರಾ ಕಾಮತ್‌ ಜೀವ ಉಳಿಸುವ ಔಷಧ ಜೊಲ್ಗೆನ್ಸ್ಮಾವನ್ನು ಆಮದು ಮಾಡಿಕೊಳ್ಳಲು ಕಸ್ಟಮ್ಸ್ ಸುಂಕದ ವಿನಾಯಿತಿ ನೀಡಿದ ಕೇಂದ್ರದ ಅತ್ಯಂತ ಮಾನವೀಯ ಮತ್ತು ಸೂಕ್ಷ್ಮಮತಿಯಿಂದ ಕೂಡಿದ ತುರ್ತು ಕ್ರಮಕ್ಕೆ ಹೃದಯದ ಅಂತರಾಳದಿಮದ ಧನ್ಯವಾದಗಳನ್ನು ಅರ್ಪಿಸುತ್ತೇನೆ" ಎಂದು ದೇವೇಂದ್ರ ಫಡಣವಿಸ್ ಪ್ರಧಾನ ಮಂತ್ರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಏನಿದು ಎಸ್‌ಎಂಎ?: ಬೆನ್ನುಹುರಿಯ ಸ್ನಾಯು ಕ್ಷೀಣತೆ(Spinal muscular atrophy)ಯು ಆನುವಂಶಿಕ ಅಸ್ವಸ್ಥತೆಗಳ ಗುಂಪಿಗೆ ಸೇರಿದ ಸಮಸ್ಯೆಯಾಗಿದ್ದು, ಇದರಲ್ಲಿ ಬೆನ್ನುಹುರಿ ಮತ್ತು ಮೆದುಳಿನ ಕಾಂಡದಲ್ಲಿನ ನರ ಕೋಶಗಳ ನಷ್ಟದಿಂದಾಗಿ ವ್ಯಕ್ತಿಯು ತಮ್ಮ ಸ್ನಾಯುಗಳ ಚಲನೆಯನ್ನು ನಿಯಂತ್ರಿಸಲಾಗುವುದಿಲ್ಲ. ಇದು ನರವೈಜ್ಞಾನಿಕ ಸ್ಥಿತಿ ಮತ್ತು ಒಂದು ರೀತಿಯ ಮೋಟಾರ್ ನ್ಯೂರಾನ್ ಕಾಯಿಲೆ. ಬೆನ್ನುಮೂಳೆಯ ಸ್ನಾಯು ಕ್ಷೀಣತೆ (ಎಸ್‌ಎಂಎ) ಸ್ನಾಯುಗಳನ್ನು ವ್ಯರ್ಥಗೊಳಿಸಿ ದೌರ್ಬಲ್ಯಕ್ಕೆ ಕಾರಣವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.