ADVERTISEMENT

ಛೋಟಾ ರಾಜನ್‌, ಐವರು ಸಹಚರರಿಗೆ 8 ವರ್ಷ ಜೈಲು ಶಿಕ್ಷೆ

ಹೋಟೆಲ್‌ ಉದ್ಯಮಿ ಕೊಲೆ ಯತ್ನ ಪ್ರಕರಣ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2019, 20:15 IST
Last Updated 20 ಆಗಸ್ಟ್ 2019, 20:15 IST
ಛೋಟಾ ರಾಜನ್‌
ಛೋಟಾ ರಾಜನ್‌   

ಮುಂಬೈ: ಹೋಟೆಲ್‌ ಉದ್ಯಮಿಯೊಬ್ಬರ ಸುಲಿಗೆ ಹಾಗೂ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ಛೋಟಾ ರಾಜನ್‌ ಹಾಗೂ ಇತರ ಐವರಿಗೆ ಇಲ್ಲಿನ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎ.ಟಿ.ವಾಂಖೆಡೆ, 8 ವರ್ಷ ಕಠಿಣ ಕಾರಾಗೃಹ ಶಿಕ್ಷೆ, ತಲಾ ₹ 5 ಲಕ್ಷ ದಂಡ ವಿಧಿಸಿ ಮಂಗಳವಾರ ತೀರ್ಪು ನೀಡಿದ್ದಾರೆ.

ನಿತ್ಯಾನಂದ ನಾಯಕ್‌, ಸೆಲ್ವಿನ್‌ ಡ್ಯಾನಿಯಲ್‌, ರೋಹಿತ್‌ ತಂಗಪ್ಪನ್‌ ಜೋಸೆಫ್‌ ಅಲಿಯಾಸ್‌ ಸತೀಶ್‌ ಕಾಲಿಯಾ, ದಿಲೀಪ್‌ ಉಪಾಧ್ಯಾಯ ಹಾಗೂ ತಲ್ವಿಂದರ್ ಸಿಂಗ್‌ ಶಿಕ್ಷೆಗೆ ಒಳಗಾದ ಇತರರು.

ಹೋಟೆಲ್‌ ಉದ್ಯಮಿ ಬಿ.ಆರ್‌.ಶೆಟ್ಟಿ ಎಂಬುವವರು 2012ರಲ್ಲಿ ಮುಂಬೈನ ಅಂಧೇರಿಯಲ್ಲಿ ತಮ್ಮ ಸ್ನೇಹಿತರೊಬ್ಬರನ್ನು ಭೇಟಿಯಾಗಲು ಹೊರಟಿದ್ದ ವೇಳೆ ಅವರ ಮೇಲೆ ಗುಂಡು ಹಾರಿಸಲಾಗಿತ್ತು. ನಂತರ ಶೆಟ್ಟಿ ನೀಡಿದ ದೂರಿನನ್ವಯ ರಾಜನ್‌ ವಿರುದ್ಧ ಮಹಾರಾಷ್ಟ್ರ ಸಂಘಟಿತ ಅಪರಾಧ ತಡೆ ಕಾಯ್ದೆ (ಮೋಕಾ) ಅಡಿ ಪ್ರಕರಣ ದಾಖಲಿಸಲಾಗಿತ್ತು.

ADVERTISEMENT

2015ರ ಅಕ್ಟೋಬರ್‌ನಲ್ಲಿ ಇಂಡೊನೇಷ್ಯಾದಲ್ಲಿ ಭಾರತದ ಅಧಿಕಾರಿಗಳು ರಾಜನ್‌ನನ್ನು ಬಂಧಿಸಿ, ಕರೆದುಕೊಂಡು ಬಂದಿದ್ದರು. ಆತನನ್ನು ಸದ್ಯ ದೆಹಲಿಯ ತಿಹಾರ್‌ ಜೈಲಿನಲ್ಲಿ ಇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.