ADVERTISEMENT

ಪೌರತ್ವ ಕಾಯ್ದೆಗೆ ಬೆಲೆ ಕೊಡಿ, ಬಡವರ ಆಸ್ತಿ ಸುಡಬೇಡಿ: ಪ್ರಧಾನಿ ಮೋದಿ ಮನವಿ

ಏಜೆನ್ಸೀಸ್
Published 22 ಡಿಸೆಂಬರ್ 2019, 9:08 IST
Last Updated 22 ಡಿಸೆಂಬರ್ 2019, 9:08 IST
ದೆಹಲಿಯ ರಾಮಲಿಲಾ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ ರ್‍ಯಾಲಿ ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು -ಎಎನ್‌ಐ ಚಿತ್ರ
ದೆಹಲಿಯ ರಾಮಲಿಲಾ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ ರ್‍ಯಾಲಿ ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು -ಎಎನ್‌ಐ ಚಿತ್ರ   

ನವದೆಹಲಿ:ಪೌರತ್ವ (ತಿದ್ದುಪಡಿ) ಕಾಯ್ದೆಗೆ ಎಲ್ಲರೂ ಬೆಲೆ ಕೊಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದರು.

2020ರಲ್ಲಿ ದೆಹಲಿ ವಿಧಾನಸಭೆಗೆ ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ರಾಮಲಿಲಾ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು,ಪೌರತ್ವ ಕಾಯ್ದೆ ವಿಚಾರದಲ್ಲಿ ಪ್ರತಿಪಕ್ಷಗಳು ದೇಶದ ಜನರ ಹಾದಿ ತಪ್ಪಿಸುತ್ತಿವೆ ಎಂದು ಆರೋಪಿಸಿದರು.

‘ದೇವರು ಅವರಿಗೆ (ಪ್ರತಿಪಕ್ಷಗಳನ್ನು ಉದ್ದೇಶಿಸಿ) ಸ್ವಲ್ಪವಾದರೂ ಬುದ್ಧಿ ಕೊಟ್ಟಿದ್ದರೆ ಅದನ್ನು ಉಪಯೋಗಿಸಲಿ ಅಂತ ಅವರಿಗೆ ಹೇಳುತ್ತೇನೆ. ದೇಶದ ಜನರಿಗೆ ಅಧಿಕಾರ ಕೊಡುವ ಮಸೂದೆ ನಾನು ತಂದಿದ್ದರೆ, ಇವರು ಜನರ ಹಕ್ಕು ಕಿತ್ತುಕೊಳ್ಳುವ ಮಸೂದೆ ಅಂತ ಹೇಳ್ತಿದ್ದಾರೆ. ನಾನು ಸುಳ್ಳು ಹೇಳಿದ್ದರೆ ಚುನಾವಣೆಯಲ್ಲಿ ಸೋಲಿಸುತ್ತಾರೆ.ಉಜ್ವಲಾ ಯೋಜನೆ ತರುವಾಗ ನಾವು ಯಾರನ್ನಾದರೂ ಕೇಳಿದ್ದೆವಾ? ಅವರ ಜಾತಿ ಕೇಳಿದ್ದೆವಾ? ಈಗ ನಾನು ಕಾಂಗ್ರೆಸ್‌ನವರಿಗೆ ಕೇಳಲು ಇಷ್ಟಪಡ್ತೀನಿ. ನೀವು ಯಾಕೆ ದೇಶದ ಜನರಿಗೆ ಸುಳ್ಳು ಹೇಳ್ತಿದ್ದೀರಿ. ಅವರನ್ನು ದಾರಿ ತಪ್ಪಿಸ್ತಿದ್ದೀರಿ. ನಾವು ಕೊಟ್ಟಿದ್ದಷ್ಟೇ ಅಲ್ಲ. ಇನ್ನು ಮುಂದೆಯೂ ಸಾಕಷ್ಟು ಕೊಡ್ತೀವಿ. ದೇಶದ ಎಲ್ಲ ಬಡ ಕುಟುಂಬಗಳಿಗೂ ಉಜ್ವಲಾ ಯೋಜನೆಯ ಫಲ ಸಿಗಲಿದೆ’ ಎಂದು ಮೋದಿ ಹೇಳಿದರು.

ADVERTISEMENT

‘ಭಾರತದಲ್ಲಿ ಹಲವು ಸಂಪ್ರದಾಯ, ಜಾತಿ, ಪೂಜಾ ಪದ್ಧತಿಯ ಜನರಿದ್ದಾರೆ. ಈ ಯೋಜನೆಯಲ್ಲಿ ನಾನು ಯಾರಿಗೂ ಧರ್ಮ ಕೇಳಲಿಲ್ಲ. ವೈದ್ಯರೂ ಅಷ್ಟೇ, ಧರ್ಮ ಕೇಳಿ ಚಿಕಿತ್ಸೆ ಕೊಡುವುದಿಲ್ಲ. ನನ್ನ ಮೇಲೆ ಏಕೆ ಇಂಥ ಸುಳ್ಳು ಆರೋಪ ಮಾಡ್ತೀರಿ. ಭಾರತವನ್ನು ಹಾಳು ಮಾಡುವ ಹಿಂಸಾ ವಿನೋದಿಗಳು ನನ್ನ ಮೇಲೆ ಸುಳ್ಳು ಆರೋಪ ಮಾಡ್ತಿದ್ದಾರೆ ಎಂದು ಮೋದಿ ಹೇಳಿದರು.

ಮುಸ್ಲಿಮರನ್ನು ಕಾಗದ, ದಾಖಲೆಗಳು ಬೇಕು ಅಂತ ದಾರಿ ತಪ್ಪಿಸುತ್ತಿದ್ದೀರಿ. ಯೋಜನೆಗಳ ಫಲಾನುಭವಿಗಳನ್ನು ಬಡತನವನ್ನೇ ಮಾನದಂಡವಾಗಿ ಗುರುತಿಸಿದೆವು. ನಮಗೆ ಬೇರೆ ಯಾವುದೇ ಮುಖ್ಯವಾಗಿರಲಿಲ್ಲ. ನಾನು ಯಾವುದೇ ಜಾತಿ, ಧರ್ಮ ನೋಡಲಿಲ್ಲ. ದಾಖಲೆಗಳ ಹೆಸರಿನಲ್ಲಿ ದಾರಿ ತಪ್ಪಿಸುವುದನ್ನು ಇನ್ನಾದರೂ ನಿಲ್ಲಿಸಿ. ಬಡವರ ಆಸ್ತಿ ಸುಡುವುದನ್ನು ನಿಲ್ಲಿಸಿ ಎಂದು ಪ್ರಧಾನಿ ಮನವಿ ಮಾಡಿದರು.

‘ನಿಮಗೆ ಆಸ್ತಿ ಹಕ್ಕು ಕೊಡುವಾಗ ನಾನು ಯಾರನ್ನಾದರೂ ಕೇಳಿದ್ದೆನೇ? ನಿಮಗೆ ದಾಖಲೆ ತರಲು ಕೇಳಿದ್ದೆನೇ? ಕೇಂದ್ರ ಸರ್ಕಾರದ ಈ ಕಾಯ್ದೆಯಿಂದ ಹಿಂದೂ, ಸಿಖ್, ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲರಿಗೂ ಸಿಕ್ಕಿತು. ನಾನು ಸಬ್‌ ಕಾ ಸಾಥ್, ಸಬ್‌ ವಿಕಾಸ್ ಮಂತ್ರಕ್ಕೆ ಬದ್ಧನಾಗಿದ್ದೇನೆ’ ಎಂದು ಮೋದಿ ಪುನರುಚ್ಚರಿಸಿದರು.

ನಾನು ದೇಶದ ಎರಡೂ ಸದನ, ಅಲ್ಲಿರುವ ಜನಪ್ರತಿನಿಧಿಗಳಿಗೆ ನಿಮ್ಮೊಡನೆ ಸೇರಿ ಆಭಿನಂದನೆ ಸಲ್ಲಿಸುತ್ತೇನೆ. ಆದರೆ ಸಹೋದರರೇ ಈ ಮಸೂದೆ ಅಂಗೀಕಾರದ ನಂತರ ಕೆಲ ರಾಜಕೀಯ ಪಕ್ಷಗಳು ಹಲವು ವಿಧದ ವಿಶ್ಲೇಷಣೆ ಮಾಡುತ್ತಿವೆ. ಜನರ ಭಾವನೆಗಳನ್ನು ಬಡಿದೆಬ್ಬಿಸುತ್ತಿವೆ.ದೇಶದ ಜನರ ಭವಿಷ್ಯಕ್ಕಾಗಿ ಲೋಕಸಭೆ, ರಾಜ್ಯಸಭೆಗಳು ಪೌರತ್ವ ತಿದ್ದುಪಡಿ ಮಸೂದೆ ಅಂಗೀಕರಿಸಿದೆ. ದೇಶದ ಸಂಸತ್ತಿಗೆ ಬೆಲೆ ಕೊಡಿ. ದೇಶದ ಜನರು ಚುನಾಯಿಸಿರುವ ಸಂಸದರಿಗೆ ಬೆಲೆ ಕೊಡಿ ಎಂದು ಮೋದಿ ಹೇಳಿದರು.

ದೆಹಲಿ ಸರ್ಕಾರದ ವಿರುದ್ಧ ಕಿಡಿ:ದೆಹಲಿಯಲ್ಲಿ ಶುದ್ಧ ಕುಡಿಯುವ ನೀರು ಸಿಕ್ತಿಲ್ಲ. ಇಲ್ಲಿ ಸರಬರಾಜಾಗುವ ನೀರು ಕುಡಿದರೆ ಅನಾರೋಗ್ಯದ ಭಯ ಕಾಡುತ್ತೆ. ಅದನ್ನು ನಿರಾಕರಿಸುವ ದಾರ್ಷ್ಟ್ಯ ಇಲ್ಲಿನ ಸರ್ಕಾರ ತೋರಿಸುತ್ತೆ. ಈಗ ದೆಹಲಿಯಲ್ಲಿ ದೇಶದಲ್ಲಿಯೇ ಅತಿಹೆಚ್ಚು ನೀರು ಶುದ್ಧೀಕರಣ ಯಂತ್ರಗಳು ಪ್ರತಿದಿನ ಮಾರಾಟವಾಗುತ್ತಿವೆ. ದುಡ್ಡು ಕೊಟ್ಟು ನೀರು ಕುಡಿಯುವ ಪರಿಸ್ಥಿತಿ ಇಲ್ಲಿನ ಜನರಿಗೆ ಏಕೆ ಬಂದಿದೆ. ಇದೆಲ್ಲ ಒಂದು ಕಡೆ ಇರಲಿ. ಅನೇಕ ಕಡೆ ನಲ್ಲಿಗಳಲ್ಲಿ ನೀರೇ ಬರುವುದಿಲ್ಲ. ಕೆಲವು ಬಂದರೂ ಕುಡಿಯುವ ಧೈರ್ಯ ಜನರಿಗೆ ಇಲ್ಲ.ಆದರೆ ದೆಹಲಿಯಲ್ಲಿರುವ ರಾಜ್ಯ ಸರ್ಕಾರ ಬಹುದೊಡ್ಡ ಸಮಸ್ಯೆ ಎದುರು ಬಾಯಿ ಮುಚ್ಚಿಕೊಂಡು ಕುಳಿತಿದೆ. ಅದು ಕುಡಿಯುವ ನೀರಿನ ಸಮಸ್ಯೆ ಎಂದು ಪ್ರಧಾನಿ ಹೇಳಿದರು.

ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣಕ್ಕೂ ನಾವು ಪ್ರಯತ್ನಿಸುತ್ತಿದ್ದೇವೆ. ಸಾವಿರಾರು ಸಿಎನ್‌ಜಿ ಬಂಕ್ ಆರಂಭಿಸಿದ್ದೇವೆ ಎಂದು ಅವರು ಹೇಳಿದರು.

‘ನಿಮ್ಮ ಹೆಸರಿನಲ್ಲಿ ರಾಜಕೀಯ ಮಾಡುವವರು ನಿಮ್ಮ ಕಷ್ಟಗಳಿಗೆ ಎಂದಿಗೂ ಸ್ಪಂದಿಸಲಿಲ್ಲ. ದೆಹಲಿಯಲ್ಲಿ ನಾಲ್ಕೂ ದಿಕ್ಕುಗಳಲ್ಲಿ ಹೊರ ವರ್ತುಲ ರಸ್ತೆ ನಿರ್ಮಿಸಿದ್ದೇವೆ. ಎಕ್ಸ್‌ಪ್ರೆಸ್‌ ವೇ ಹಲವು ವರ್ಷಗಳಿಂದ ಬಾಕಿಯಿತ್ತು. ಅದನ್ನೂ ನಾವು ಪೂರ್ಣಗೊಳಿಸಿದೆವು. ದೆಹಲಿಯ ಟ್ರಾಫಿಕ್ ಮತ್ತು ಮಾಲಿನ್ಯ ಸಮಸ್ಯೆ ಇದರಿಂದ ಕಡಿಮೆಯಾಗಿದೆ’ ಎಂದು ಪ್ರಧಾನಿ ನುಡಿದರು.

‘ನಿಮ್ಮ ರಾಜ್ಯ ಸರ್ಕಾರದ ಮುಖ್ಯಸ್ಥರು ಹೇಗಿದ್ದಾರೆ ಅಂತ ನಾನು ಹೇಳುವುದೇ ಇಲ್ಲ. ವಿರೋಧಗಳ ನಡುವೆಯೂ ಮೆಟ್ರೊ ವಿಸ್ತರಣೆಗೆ ಆದ್ಯತೆ ಕೊಟ್ಟಿದ್ದೇವೆ. ದೆಹಲಿ ಮೆಟ್ರೊದ 4ನೇ ಹಂತದ ಕಾಮಗಾರಿಗೆ ವೇಗ ಕೊಟ್ಟಿದ್ದೇವೆ. ಇಲ್ಲಿನ ರಾಜ್ಯ ಸರ್ಕಾರ ಸಹಕಾರ ಕೊಟ್ಟಿದ್ದರೆ ಈ ಕೆಲಸಗಳು ಮೊದಲೇ ಶುರುವಾಗುತ್ತಿದ್ದವು’ ಎಂದು ಅವರು ಹೇಳಿದರು.

ದೆಹಲಿಯ 2000ಕ್ಕೂ ಹೆಚ್ಚು ಸರ್ಕಾರಿ ಬಂಗ್ಲೆಗಳನ್ನು ಖಾಲಿ ಮಾಡಿಸುವ ಜೊತೆಗೆ ಸಾವಿರಾರು ಜನರಿಗೆ ಮನೆ ಹಕ್ಕು ಕೊಟ್ಟೆವು. ನೀವು ನನ್ನ ವಿಐಪಿಗಳು. ನಾನು ಹಿಂದಿನವರಂತೆ ಅಲ್ಲ. ದೆಹಲಿ ಜನರ ಬದುಕು ಸುಲಲಿತವಾಗಬೇಕು. ಸಾರಿಗೆ, ಸಂಪರ್ಕ ಸರಿಯಾಗಬೇಕು ಅನ್ನುವುದು ಕೇಂದ್ರ ಸರ್ಕಾರದ ಆದ್ಯತೆ ಎಂದು ಪ್ರಧಾನಿ ಹೇಳಿದರು.

ಕಡಿಮೆ ಸಮಯದಲ್ಲಿ ತಂತ್ರಜ್ಞಾನದ ಸಹಾಯದಿಂದ ದೆಹಲಿಯ ಸಾವಿರಾರು ಕಾಲೊನಿಗಳ ಗಡಿಗಳನ್ನು ಗುರುತಿಸಿದೆವು. ಇಷ್ಟೇ ಅಲ್ಲ. ಅವೆಲ್ಲವನ್ನೂ ಪೋರ್ಟಲ್‌ನಲ್ಲಿ ಹಾಕಿದ್ದೇವೆ. ಇದು ದೆಹಲಿಯ ವ್ಯಾಪಾರ ವ್ಯವಹಾರವನ್ನು ಹೆಚ್ಚಿಸುತ್ತದೆ.ಈಗಷ್ಟೇ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ದೆಹಲಿ ಕಾಲೊನಿಗಳ ಮಸೂದೆಗೆ ಅಂಗೀಕಾರ ಸಿಕ್ಕಿತು.ಮನೆಗಳು ಅಕ್ರಮ, ಅನಧಿಕೃತ ಎಂದೆಲ್ಲಾ ಹೇಳುತ್ತಿದ್ದರು. ಹೀಗಾಗಿ ಅವರ ಬದುಕು ಮುರುಟಿಹೋಗಿತ್ತು. ಚುನಾವಣೆ ಬಂದಾಗ ನೆಲಸಮ ಮಾಡುವ ದಿನಾಂಕ ಮುಂದೆ ಹೋಗ್ತಿತ್ತು. ನಿಮಗೆ ಈ ಸಮಸ್ಯೆಗಳಿಂದ ಮುಕ್ತಿ ಕೊಡುವ ಪ್ರಾಮಾಣಿಕತೆಯನ್ನು ಇವರು ತೋರಿಸಲಿಲ್ಲ ಎಂದು ಎಎಪಿ ಸರ್ಕಾರದ ವಿರುದ್ಧ ಹರಿಹಾಯ್ದರು.

ದೆಹಲಿಯ ಜನರನ್ನು ಅವರ ಅಧಿಕಾರದಿಂದ ಯಾರು ದೂರ ಇಟ್ಟಿದ್ದರೋ ಅವರು ನಿಮ್ಮ ನಗು ನೋಡಬೇಕು. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ನಂತರವೂ ದೆಹಲಿಯ ನಿವಾಸಿಗಳಿಗೆ ಭಯ, ಅನಿಶ್ಚಿತತೆ ಇತ್ತು. ಇದೆಲ್ಲದರ ಜೊತೆಗೆ ಚುನಾವಣೆಯ ಸುಳ್ಳುಗಳನ್ನು ಅವರು ಎದುರಿಸಬೇಕಾಗಿತ್ತು.ಜೀವನದ ದೊಡ್ಡ ನೋವು ನಿವಾರಣೆಯಾದರೆ ಅದರ ಖುಷಿ ಹೇಗಿರುತ್ತೆ ಎನ್ನುವುದು ನಿಮ್ಮ ಮುಖ ನೋಡಿದಾಗ ತಿಳಿಯುತ್ತದೆ. ದೆಹಲಿಯ ಲಕ್ಷಾಂತರ ಜನರ ಬದುಕಿನಲ್ಲಿ ಹೊಸಬೆಳಕು ತರುವ ಅವಕಾಶ ನನಗೆ ಮತ್ತು ಬಿಜೆಪಿಗೆ ಸಿಕ್ಕಿದೆ. ಪ್ರಧಾನ ಮಂತ್ರಿ ಉದಯ್ ಯೋಜನೆಯ ಮೂಲಕ ನಿಮ್ಮ ಮನೆಯ ಮೇಲೆ ನಿಮಗೆ ಸಂಪೂರ್ಣ ಅಧಿಕಾರ ಸಿಕ್ಕಿದೆ ಎಂದು ಮೋದಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.