ADVERTISEMENT

ಯಡತೊರೆ ಯೋಗಾನಂದೇಶ್ವರ ಮಠ: ‘ಶಿಕ್ಷಣ ನೀತಿಯಲ್ಲಿ ಮೌಲ್ಯಾಧಾರಿತ ಶಿಕ್ಷಣ’

ಶಿಷ್ಯ ಸ್ವೀಕಾರ ಉತ್ಸವ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 21:59 IST
Last Updated 17 ಫೆಬ್ರುವರಿ 2021, 21:59 IST
ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಸ್ವಾಮೀಜಿಗಳ ಆಶೀರ್ವಾದ ಪಡೆದರು
ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಸ್ವಾಮೀಜಿಗಳ ಆಶೀರ್ವಾದ ಪಡೆದರು   

ಸಾಲಿಗ್ರಾಮ (ಮೈಸೂರು): ‘ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಾಂಸ್ಕೃತಿಕ, ಧಾರ್ಮಿಕ ಮೌಲ್ಯಗಳ ಜತೆಗೆ ಮೌಲ್ಯಾಧಾರಿತ ಶಿಕ್ಷಣ ವ್ಯವಸ್ಥೆಯನ್ನು ಅಡಕಗೊಳಿಸಲಾಗಿದ್ದು, ನೂತನ ಶಿಕ್ಷಣ ನೀತಿ ಈ ವರ್ಷದಿಂದಲೇ ಜಾರಿಯಾಗುತ್ತಿದೆ’ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಸಾಲಿಗ್ರಾಮ ತಾಲ್ಲೂಕಿನ ಗಡಿಭಾಗದಲ್ಲಿ ಇರುವ ಜಪದಕಟ್ಟೆ ಕ್ಷೇತ್ರದಲ್ಲಿ ಬುಧವಾರ ಯಡತೊರೆ ಯೋಗಾನಂದೇಶ್ವರ ಸರಸ್ವತಿ ಮಠದ ಉತ್ತರಾಧಿಕಾರಿ ಶಿಷ್ಯ ಸ್ವೀಕಾರ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಶಿಕ್ಷಣವನ್ನು ಉನ್ನತ ಉದ್ದೇಶ ಇಟ್ಟುಕೊಂಡು ಕಲಿಯಬೇಕು ಎಂಬುದು ನಮ್ಮ ಹಿರಿಯರ ಆಪೇಕ್ಷೆ. ಅವರ ಆಶಯಕ್ಕೆ ತಕ್ಕಂತೆಯೇ ಶಿಕ್ಷಣ ನೀತಿ ರೂಪುಗೊಂಡಿದೆ. ಕಿರಿಯ ಹಂತದಿಂದಲೇ ಸಾಮಾಜಿಕ ಹೊಣೆಗಾರಿಕೆಯನ್ನು ಕಲಿಸುವಂಥ ಉತ್ತಮ ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ಸಿಗಲಿದೆ’ ಎಂದರು.

ADVERTISEMENT

ಸೌಂದರ್ಯ ಲಹರಿ ಪ್ರಭಾವ:ಶಂಕರಭಾರತೀಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಾ ಬಂದಿರುವ ಆದಿ ಶಂಕರರ ‘ಸೌಂದರ್ಯ ಲಹರಿ ಪಾರಾಯಣ ನನ್ನ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ನನ್ನ ಮತ ಕ್ಷೇತ್ರಮಲ್ಲೇಶ್ವರದಲ್ಲೂ ಸೌಂದರ್ಯ ಲಹರಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಎಂದು ನುಡಿದರು.

ಶಿರಸಿ ಸೋಂದಾ ಮಠದ ಪೀಠಾಧೀಶ ಗಂಗಾಧರೇಂದ್ರ ಸರಸ್ಪತಿಸ್ವಾಮೀಜಿ ಆಶೀರ್ವಚನ ನೀಡಿ, ‘ರಾಜ್ಯದಲ್ಲಿ ಇರುವ ಪ್ರಮುಖ ದೇವಾಲಯಗಳನ್ನು ಸರ್ಕಾರ ತನ್ನಹಿಡಿತಕ್ಕೆತೆಗೆದುಕೊಳ್ಳುವುದನ್ನು ನ್ಯಾಯಾಲಯ ವಿರೋಧಿಸಿ ತೀರ್ಪು ನೀಡಿದೆ. ಸರ್ಕಾರದ ಕ್ರಮವನ್ನು ನಾವೂ ವಿರೋಧಿಸುತ್ತೇವೆ. ಸಮಾಜದಲ್ಲಿ ಇರುವ ಚಿಂತಕರ ಸಲಹೆ ಪಡೆದು ಮುಂದಿನ ಕ್ರಮ ತೆಗೆದುಕೊಳ್ಳಬೇಕು. ರಾಜಕಾರಣಿಗಳ ಪೀಠಕ್ಕಿಂತ ಸಮಾಜವನ್ನು ತಿದ್ದುವ ಶ್ರೀಗಳ ಪೀಠ ಅಮೂಲ್ಯವಾದದ್ದು’ ಎಂದರು.

‘ಭಾಸ್ಕರ ಶರ್ಮಾ ಅವರಿಗೆಸನ್ಯಾಸ ದೀಕ್ಷೆ ನೀಡಿ, ಬ್ರಹ್ಮಾನಂದ ಸ್ವಾಮೀಜಿಗಳಾಗಿ ಅಭಿದಾನ ಮಾಡಲಾಯಿತು. ಮುಂದಿನ ದಿನಗಳಲ್ಲಿ ಶ್ರೀಗಳು ಯಶಸ್ವಿಯಾಗಿ ಮಠದ ಕಾರ್ಯ ನಿರ್ವಹಿಸಲಿ’ ಎಂದು ಹೇಳಿದರು.

ಮಠದ ಶಂಕರಭಾರತೀ ಸ್ವಾಮೀಜಿ,ಕಾಸರಗೋಡು ಎಡನೀರು ಮಠದ ಸಚ್ಚಿದಾನಂದಭಾರತೀ ಸ್ವಾಮೀಜಿ, ಇಂದೋರಿನ ಪ್ರಣವಾನಂದ ಸರಸ್ವತಿಜೀ ಮಹಾರಾಜ್, ಮೈಸೂರು ರಾಮಕೃಷ್ಣ ಮಠದ ಮುಕ್ತಿದಾನಂದಜೀ ಮಹಾರಾಜ್, ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ವೀರೇಶಾನಂದಜೀ ಮಹಾರಾಜ್, ಪಾವಗಡ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಜಪಾನಂದಜೀ ಮಹಾರಾಜ್, ಹೊಳೆನರಸೀಪುರದ ಪ್ರಕಾಶಾನಂದೇಂದ್ರ ಸರಸ್ಪತೀ ಮಹಾರಾಜ್, ಕೇರಳದ ಕೃಷ್ಣಾತ್ಮಾನಂದ ಸರಸ್ಪತೀ, ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ಇದ್ದರು.

ವೇದಿಕೆ ಏರದ ಶಾಸಕ: ಶಾಸಕ ಸಾ.ರಾ.ಮಹೇಶ್ ವೇದಿಕೆಗೆ ಬರಲಿಲ್ಲ.‘ಅವರೊಂದಿಗೆ ವೇದಿಕೆ ಹಂಚಿಕೊಳ್ಳುವುದಿಲ್ಲ’ ಎಂದು ವಿಶ್ವನಾಥ್‌ ಹೆಸರು ಹೇಳದೆ ಜಾರಿ ಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.