ADVERTISEMENT

ನಾಯಿ ಕಡಿತ– ಪ್ರತಿ ಹಲ್ಲಿನ ಗುರುತಿಗೆ ₹10 ಸಾವಿರ ಪರಿಹಾರ: ಹೈಕೋರ್ಟ್

ಪಿಟಿಐ
Published 15 ನವೆಂಬರ್ 2023, 15:41 IST
Last Updated 15 ನವೆಂಬರ್ 2023, 15:41 IST
ನಾಯಿ ಹಲ್ಲಿನ ಡಾಕ್ಟರ್
ನಾಯಿ ಹಲ್ಲಿನ ಡಾಕ್ಟರ್   

ಚಂಡೀಗಢ: ಬಿಡಾಡಿ ಪ್ರಾಣಿಗಳ ದಾಳಿಯ ಸಂತ್ರಸ್ತರಿಗೆ ಪರಿಹಾರ ನೀಡುವುದು ಸರ್ಕಾರದ ಜವಾಬ್ದಾರಿ ಎಂದು ಪಂಜಾಬ್ ಮತ್ತು ಹರಿಯಾಣ ಕೈಕೋರ್ಟ್ ಹೇಳಿದೆ.

ನಾಯಿ ಕಡಿತ ಪ್ರಕರಣದಲ್ಲಿ, ಸಂತ್ರಸ್ತರಿಗೆ ಆಗುವ ಗಾಯದಲ್ಲಿ ಪ್ರತಿ ಹಲ್ಲಿನ ಗುರುತಿಗೆ ₹ 10,000 ಆರ್ಥಿಕ ನೆರವು ನೀಡಬೇಕು. ನಾಯಿ ಕಡಿತದ ಗಾಯದಿಂದಾಗಿ ಮಾಂಸವು ಹೊರಗೆ ಬಂದಿದ್ದ ಸಂದರ್ಭದಲ್ಲಿ 0.2 ಸೆಂ.ಮೀ. ಗಾಯಕ್ಕೆ ಕನಿಷ್ಠ ₹ 20 ಸಾವಿರ ಪರಿಹಾರ ನೀಡಬೇಕು ಎಂದು ಸ್ಪಷ್ಟಪಡಿಸಿದೆ.  

ನ್ಯಾಯಮೂರ್ತಿ ವಿನೋದ್‌ ಎಸ್ ಭಾರದ್ವಾಜ್‌ ಅವರಿದ್ಠ ಪೀಠವು, ಬಿಡಾಡಿ ಪ್ರಾಣಿ ದಾಳಿಯ ಸಂತ್ರಸ್ತರು ಅಥವಾ ಅವರ ಕುಟುಂಬ ಸದಸ್ಯರಿಗೆ ಪರಿಹಾರಕ್ಕೆ ಸಂಬಂಧಿಸಿದ 193 ಅರ್ಜಿಗಳನ್ನು ವಿಲೇವಾರಿ ಮಾಡಿದ ಬಳಿಕ ಈ ತೀರ್ಪು ನೀಡಿದೆ. 

ADVERTISEMENT

ಪ್ರಾಣಿಗಳ (ಬೀದಿ, ಕಾಡು, ಸಾಕುಪ್ರಾಣಿ) ದಾಳಿಯಿಂದ ವರದಿಯಾದ ಯಾವುದೇ ಘಟನೆ ಅಥವಾ ಅಪಘಾತದ ಬಗ್ಗೆ ದೂರು ಸ್ವೀಕೃತಿ ಕುರಿತು ಪೊಲೀಸರು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಸಹ ನ್ಯಾಯಾಲಯ ಹೊರಡಿಸಿದೆ.  

‘ಬಿಡಾಡಿ ಅಥವಾ ಕಾಡು ಪ್ರಾಣಿಗಳಿಂದ ಉಂಟಾಗುವ ಅಪಘಾತದ ಬಗ್ಗೆ ಮಾಹಿತಿ ಪಡೆದ ನಂತರ, ಪೊಲೀಸ್‌ ಠಾಣೆಯ ಠಾಣಾಧಿಕಾರಿ (ಎಸ್‌ಎಚ್‌ಒ) ಅನಗತ್ಯ ವಿಳಂಬ ಮಾಡದೆ ಡಿಡಿಆರ್ (ದೈನಂದಿನ ಡೈರಿ ವರದಿ) ದಾಖಲಿಸಬೇಕು. ಪೊಲೀಸ್ ಅಧಿಕಾರಿಯು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಬೇಕು. ವರದಿಯ ಪ್ರತಿಯನ್ನು ಸಂಬಂಧಪಟ್ಟವರಿಗೆ ಕಳುಹಿಸಬೇಕು’ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡುವಂತೆ ನ್ಯಾಯಪೀಠ ಪಂಜಾಬ್ ಮತ್ತು ಹರಿಯಾಣದ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿತು.

ಬಿಡಾಡಿ ದನಗಳು ಅಥವಾ ಪ್ರಾಣಿಗಳಿಂದ (ಹಸುಗಳು, ಎತ್ತುಗಳು, ಕತ್ತೆಗಳು, ನಾಯಿಗಳು, ಎಮ್ಮೆಗಳು ಇತ್ಯಾದಿ ಸೇರಿದಂತೆ) ಉಂಟಾದ ಘಟನೆಗೆ ಸಂಬಂಧಿಸಿದಂತೆ ಪಾವತಿಸಬೇಕಾದ ಪರಿಹಾರ ಮೊತ್ತವನ್ನು ನಿರ್ಧರಿಸಲು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸುವಂತೆ ನ್ಯಾಯಾಲಯವು ಪಂಜಾಬ್, ಹರಿಯಾಣ ಮತ್ತು ಚಂಡೀಗಢ ಆಡಳಿತಕ್ಕೆ ನಿರ್ದೇಶನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.