ADVERTISEMENT

ಸಶಸ್ತ್ರ ಪಡೆಗಳ ನೈತಿಕ ಬಲ ಕುಗ್ಗಿಸುತ್ತಿರುವ ಕಾಂಗ್ರೆಸ್‌: ಬಿಜೆಪಿ ಆರೋಪ

ಗಡಿಯಲ್ಲಿ ಚೀನಾ ಅತಿಕ್ರಮಣ ಚರ್ಚೆಗೆ ಅವಕಾಶ ನಿರಾಕರಣೆ: ರಾಜ್ಯಸಭೆಯಿಂದ ಹೊರನಡೆದ ವಿಪಕ್ಷಗಳು

ಪಿಟಿಐ
Published 19 ಡಿಸೆಂಬರ್ 2022, 11:11 IST
Last Updated 19 ಡಿಸೆಂಬರ್ 2022, 11:11 IST
ಪಿಯೂಷ್ ಗೋಯಲ್
ಪಿಯೂಷ್ ಗೋಯಲ್   

ನವದೆಹಲಿ: ಗಡಿಭಾಗದಲ್ಲಿ ಚೀನಾದ ಅತಿಕ್ರಮಣ ಕುರಿತು ಚರ್ಚೆಗೆ ಸಭಾಪತಿ ಜಗದೀಪ್ ಧನಕರ್ ಅವರು ಅನುಮತಿ ನೀಡದ ಕಾರಣ, ರಾಜ್ಯಸಭೆಯ ಕಲಾಪದಿಂದ ಸೋಮವಾರ ಕಾಂಗ್ರೆಸ್, ಎಡ, ಡಿಎಂಕೆ ಸೇರಿದಂತೆ ಇತರ ವಿರೋಧಪಕ್ಷಗಳು ಹೊರನಡೆದವು.

ನಿಯಮ 267ರ ಅಡಿಯಲ್ಲಿ ಎಲ್ಲಾ ಒಂಬತ್ತು ನೋಟಿಸ್‌ಗಳು ಕ್ರಮಬದ್ಧವಾಗಿಲ್ಲ ಎನ್ನುವ ಕಾರಣ ನೀಡಿ ಧನಕರ್ ಅವರು ಚರ್ಚೆಗೆ ಅವಕಾಶ ನಿರಾಕರಿಸಿದರು.

‘ರಾಷ್ಟ್ರೀಯ ಭದ್ರತೆಯಂಥ ಸೂಕ್ಷ್ಮವಿಷಯಗಳನ್ನು ರಾಜಕೀಯಗೊಳಿಸಬಾರದು’ ಎಂದು ಬಿಜೆಪಿ ಹೇಳಿತು.

ADVERTISEMENT

ರಾಜ್ಯಸಭೆಯ ನಾಯಕ ಹಾಗೂ ಬಿಜೆಪಿಯ ಹಿರಿಯ ಮುಖಂಡ ಪೀಯೂಷ್ ಗೋಯಲ್ ಅವರು, ‘2004 ಮತ್ತು 2014ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಆಡಳಿತವಿದ್ದಾಗಸಂಸತ್ತಿನಲ್ಲಿ ಸೂಕ್ಷ್ಮ ವಿಷಯಗಳ ಬಗ್ಗೆ ಚರ್ಚೆಗೆ ಅನುಮತಿ ನೀಡದಿರುವ ಹಾಗೂ ಈ ಕುರಿತು ಸ್ಪಷ್ಟೀಕರಣಕ್ಕೆ ಹಲವು ಬೇಡಿಕೆಗಳನ್ನು ಮಂಡಿಸಿದ ನಿದರ್ಶನವಿದೆ’ ಎಂದು ಹೇಳಿದರು.

ವಿಪಕ್ಷಗಳ ಸಭಾತ್ಯಾಗದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೋಯಲ್, ‘ಸಂಸತ್ತಿನ ನಿಯಮಗಳು ಮತ್ತು ನಿಬಂಧನೆಗಳನ್ನು ಗೌರವಿಸುವುದು ಹಾಗೂ ಸಭಾಪತಿಯ ನಿರ್ಣಯಗಳಿಗೆ ಸ್ವಲ್ಪವೂ ಗಮನ ಕೊಡದಂಥ ಹತಾಶೆಯ ಸ್ಥಿತಿಗೆ ವಿಪಕ್ಷಗಳು ತಲುಪಿರುವುದು ದುರದೃಷ್ಟಕರ’ ಎಂದರು.

ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಷಿ ಮಾತನಾಡಿ,ವಿಶೇಷವಾಗಿ ಕಾಂಗ್ರೆಸ್ ಪಕ್ಷವು ಅತ್ಯಂತ ಕೀಳುಮಟ್ಟದ ರಾಜಕೀಯವನ್ನು ಆಶ್ರಯಿಸುತ್ತಿದೆ ಎಂದು ಆರೋಪಿಸಿದರು.

‘ಇಡೀ ದೇಶವು ಒಂದೇ ಧ್ವನಿಯಲ್ಲಿ ಮಾತನಾಡುವಾಗ ಮತ್ತು ಸಶಸ್ತ್ರ ಪಡೆಗಳ ಶೌರ್ಯವನ್ನು ಪ್ರೋತ್ಸಾಹಿಸಿ, ಪ್ರಶಂಸೆ ಮಾಡಬೇಕಾದ ಸಮಯದಲ್ಲಿ ಕಾಂಗ್ರೆಸ್ ಹಾಗೂ ಆ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸಶಸ್ತ್ರ ಪಡೆಗಳ ನೈತಿಕತೆಯನ್ನು ಕುಸಿಯುವಂಥ ಮಾತುಗಳನ್ನಾಡುತ್ತಿದ್ದಾರೆ. ರಾಷ್ಟ್ರೀಯ ಭದ್ರತೆಯಂಥ ಸೂಕ್ಷ್ಮ ವಿಷಯವನ್ನು ರಾಜಕೀಯಗೊಳಿಸದೇ, ಸಂಸತ್ತು ಕಾರ್ಯ ನಿರ್ವಹಿಸಲು ಅವಕಾಶ ನೀಡಬೇಕು’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.