ಶಿರಡಿ: ‘ಬಡತನ ನಿರ್ಮೂಲನೆ ವಿಷಯದಲ್ಲಿ ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಸಂಪೂರ್ಣ ನಿರ್ಲಕ್ಷ್ಯವಹಿಸಿದ್ದವು. ಕೇವಲ ಒಂದು ನಿರ್ದಿಷ್ಟ ಕುಟುಂಬದ ಹಿತಾಸಕ್ತಿಗಾಗಿ ಕಾರ್ಯನಿರ್ವಹಿಸಿದವು’ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದರು.
ಶುಕ್ರವಾರ ಇಲ್ಲಿ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರದಲ್ಲಿದ್ದ ಹಿಂದಿನ ಸರ್ಕಾರಗಳು ಹಾಗೂ ಈಗಿನ ಸರ್ಕಾರದ ನಡುವಣ ವ್ಯತ್ಯಾಸ ಎಂದರು.
‘ಹಿಂದಿನ ಸರ್ಕಾರಗಳಲ್ಲೂ ಅಭಿವೃದ್ಧಿಗೆ ಪ್ರಯತ್ನಿಸಲಾಗಿತ್ತು. ಆದರೆ, ಅದು ಒಂದು ನಿರ್ದಿಷ್ಟ ಕುಟುಂಬವನ್ನು ಪೋಷಿಸಲು ಮತ್ತು ಉತ್ತೇಜನ ನೀಡಲು ಮಾತ್ರ ಈ ಸರ್ಕಾರಗಳು ಸೀಮಿತವಾಗಿದ್ದವು. ಬಡವರಿಗೆ ಆಶ್ರಯ ಒದಗಿಸಿ ಸಬಲೀಕರಣ ಮಾಡುವ ಉದ್ದೇಶ ಕಾಂಗ್ರೆಸ್ ಸರ್ಕಾರಕ್ಕೆ ಇರಲಿಲ್ಲ. ಕೇವಲ ಮತ ಬ್ಯಾಂಕ್ ಸೃಷ್ಟಿಸಿಕೊಳ್ಳುವ ಉದ್ದೇಶ ಮಾತ್ರ ಇತ್ತು’ ಎಂದು ನೆಹರು ಕುಟುಂಬವನ್ನು ಟೀಕಿಸಿದರು.
ಬಡಜನರಿಗಾಗಿ ಪಿಎಂಎವೈ: ಬಡತನವನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ವಿಡಿಯೊ ಕಾನ್ಫೆರೆನ್ಸ್ ಮೂಲಕ ಮಹಾರಾಷ್ಟ್ರದ ವಿವಿಧೆಡೆಯ ಪಿಎಂಎವೈ ಫಲಾನುಭವಿಗಳ ಜತೆ ಸಮಾಲೋಚನೆ ನಡೆಸಿದ ಅವರು, ‘ಪಿಎಂಎವೈ ಯೋಜನೆಯ ಮನೆಗಳ ಗುಣಮಟ್ಟದಿಂದ ಕೂಡಿವೆಯೇ ಹಾಗೂ ಯಾರಿಗಾದರೂ ಲಂಚ ನೀಡಬೇಕಾಯಿತೇ’ ಎಂದು ಪ್ರಶ್ನಿಸಿದರು. ಇದಕ್ಕೆ ಫಲಾನುಭವಿಗಳು ಲಂಚ ನೀಡಿಲ್ಲ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.