ನವದೆಹಲಿ: ಈಗಾಗಲೇ ಮೂರು ಕೃಷಿ ಕಾನೂನುಗಳನ್ನು ತಂದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿರುವ ಕೇಂದ್ರ ಸರ್ಕಾರ, ಇದೀಗ ರಸಗೊಬ್ಬರಗಳ ಬೆಲೆ ಏರಿಕೆ ಮೂಲಕ ರೈತರ ಮೇಲೆ ಮತ್ತೊಂದು ಪ್ರಹಾರ ಮಾಡಿದೆ ಎಂದು ಬುಧವಾರ ಕಾಂಗ್ರೆಸ್ ದೂರಿದೆ.
‘ಮೋದಿ ಸರ್ಕಾರವು ಜಿಎಸ್ಟಿ, ಪೆಟ್ರೋಲ್, ಡೀಸೆಲ್ ಮತ್ತು ರಸಗೊಬ್ಬರ ಬೆಲೆಗಳನ್ನು ಹೆಚ್ಚಿಸಿದೆ. ಸಾಂಕ್ರಾಮಿಕ ರೋಗದ ಈ ಕಾಲಘಟ್ಟದಲ್ಲಿ ಮೋದಿ ಸ್ನೇಹಿತರ ಆದಾಯವನ್ನು ಈ ಮೂಲಕ ಹೆಚ್ಚಿಸಿ, ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ. ಅಲ್ಲದೆ ಕೃಷಿ ಸಬ್ಸಿಡಿ, ರೈತರ ಆದಾಯ ಮತ್ತು ಕೇಂದ್ರ ಸರ್ಕಾರದ ಘನತೆಯನ್ನು ಕುಂದಿಸಲಾಗಿದೆ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ಮಾಡಿದ್ದಾರೆ.
‘ದೇಶದ ಕೃಷಿಯನ್ನು ನಾಶ ಮಾಡಿ, ಅದನ್ನು ಕಾರ್ಪೊರೇಟ್ ವಲಯದ ಸ್ನೇಹಿತರಿಗೆ ಹಸ್ತಾಂತರಿಸಲು ಕೇಂದ್ರ ಯೋಜಿಸುತ್ತಿದೆ’ ಎಂದು ಕಾಂಗ್ರೆಸ್ ಆರೋಪಿಸಿದೆ.
‘ಮೋದಿ ಸರ್ಕಾರವು ರೈತ ವಿರೋಧಿಯಾಗಿದ್ದು, ಡಿಎಪಿ ಮತ್ತು ಇತರ ರಸಗೊಬ್ಬರ ದರಗಳನ್ನು ಏರಿಸಿದೆ. ಇದರಿಂದ ದೇಶದ ರೈತರಿಗೆ ಹೆಚ್ಚುವರಿಯಾಗಿ ₹ 20,000 ಕೋಟಿ ಹೊರೆ ಬೀಳಲಿದೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಸುದ್ದಿಗಾರರಿಗೆ ತಿಳಿಸಿದರು.
‘50 ಕೆ.ಜಿ ಡಿಎಪಿ ಗೊಬ್ಬರದ ಬೆಲೆಯನ್ನು ₹ 1,200ರಿಂದ ₹ 1,900ಕ್ಕೆ ಏರಿಸಲಾಗಿದೆ’ ಎಂದು ದೂರಿದ ಅವರು, ರಸಗೊಬ್ಬರಗಳ ಬೆಲೆ ಹೆಚ್ಚಳವನ್ನು ಸರ್ಕಾರ ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಕೃಷಿ ಉಪಕರಣಗಳ ಮೇಲೂ ಸರ್ಕಾರ ಜಿಎಸ್ಟಿ ವಿಧಿಸಿದೆ ಎಂದೂ ಅವರು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.