ಗಾಜಿಯಾಬಾದ್: ಇಲ್ಲಿನ ಸ್ಮಶಾನದ ಚಾವಣಿ ಕುಸಿತ ಪ್ರಕರಣದಲ್ಲಿ ಬೇಕಾಗಿದ್ದ ಗುತ್ತಿಗೆದಾರನನ್ನು ಪೊಲೀಸರು ಉತ್ತರ ಪ್ರದೇಶದ ಮುಜಾಫರ್ನಗರದ ಗಡಿಯ ಮೀರತ್ ಬಳಿ ಬಂಧಿಸಿದ್ದಾರೆ. ದುರಂತದಲ್ಲಿ ಒಟ್ಟು 24 ಜನರು ಸತ್ತಿದ್ದರು.
ಬಂಧಿತ ಗುತ್ತಿಗೆದಾರ ತ್ಯಾಗಿ, ಅವಘಡ ನಡೆದ ನಂತರ ತಲೆಮರೆಸಿಕೊಂಡಿದ್ದ. ಪೊಲೀಸರ ತಂಡ ಈತನನ್ನು ಸತ್ಯೇದಿ ಗ್ರಾಮದ ಬಳಿ ಗಂಗಾ ನದಿ ಸೇತುವೆ ಹತ್ತಿರ ಬಂಧಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.
ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಬಂದಿದ್ದ 24 ಜನರು ಭಾನುವಾರ ಚಾವಣಿ ಕುಸಿತದಿಂದ ಮೃತಪಟ್ಟಿದ್ದರು. ಇತರ 17 ಮಂದಿ ಗಾಯಗೊಂಡಿದ್ದರು.
ಗಾಜಿಯಾಬಾದ್ ಠಾಣೆಯ ಪೊಲೀಸರು ಸೋಮವಾರ ಮುರ್ದಾನಗರದ ಪಾಲಿಕೆ ಕಾರ್ಯನಿರ್ವಾಹಕ ಅಧಿಕಾರಿ ನಿಹಾರಿಕಾ ಸಿಂಗ್, ಕಿರಿಯ ಎಂಜಿನಿಯರ್ ಚಂದ್ರಪಾಲ್, ಮೇಲ್ವಿಚಾರಕ ಆಶೀಶ್ ಅವರನ್ನು ಬಂಧಿಸಿದ್ದರು. ಈ ಎಲ್ಲರೂ ಕಟ್ಟಡ ಸಂಬಂಧಿತ ಗುತ್ತಿಗೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ಇವರನ್ನು 14 ದಿನದ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.