ADVERTISEMENT

ಬಿಹಾರ ಸಚಿವರ ವಜಾಕ್ಕೆ ಬಿಜೆಪಿ ಆಗ್ರಹ

ರಾಮಚರಿತಮಾನಸ ಕಾವ್ಯದ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದ ಚಂದ್ರಶೇಖರ್‌

ಪಿಟಿಐ
Published 12 ಜನವರಿ 2023, 19:31 IST
Last Updated 12 ಜನವರಿ 2023, 19:31 IST
ನಿತೀಶ್‌ ಕುಮಾರ್‌ 
ನಿತೀಶ್‌ ಕುಮಾರ್‌    

ಪಟ್ನಾ: ತುಳಸಿದಾಸರು ರಚಿಸಿರುವ ರಾಮಚರಿತಮಾನಸ ಕಾವ್ಯದ ಕುರಿತು ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ್‌ ಅವರು ಅವಹೇಳನಕಾರಿ ಹೇಳಿಕೆ ನೀಡಿದ್ದು, ಇದು ಬಿಜೆಪಿಯ ಆಕ್ರೋಶಕ್ಕೆ ಕಾರಣವಾಗಿದೆ. ಕಾಂಗ್ರೆಸ್‌ ಕೂಡ ಇದನ್ನು ಖಂಡಿಸಿದೆ.

ನಳಂದ ವಿಶ್ವವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಚಂದ್ರಶೇಖರ್‌ ಅವರು, ‘ರಾಮಚರಿತಮಾನಸ ಮತ್ತು ಮನುಸ್ಮೃತಿ ಸಮಾಜದಲ್ಲಿ ದ್ವೇಷ ಹರಡುತ್ತವೆ. ಹೀಗಾಗಿಯೇ ದಲಿತರು ಮತ್ತು ಅಲ್ಪಸಂಖ್ಯಾತರು ಇವುಗಳನ್ನು ವಿರೋಧಿಸುತ್ತಾರೆ’ ಎಂದು ಹೇಳಿದ್ದರು.

ಚಂದ್ರಶೇಖರ್‌ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ADVERTISEMENT

‘ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಚಂದ್ರಶೇಖರ್‌ ಅವರ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತರುವ ಹೇಳಿಕೆ ಕೊಡಿಸಿದ್ದಾರೆ’ ಎಂದು ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ದೂರಿದ್ದಾರೆ.

‘ಮಾರ್ಕ್ಸ್‌ವಾದಿ ಮನಸ್ಥಿತಿ ಉಳ್ಳ ಅವರಿಗೆ ಈ ದೇಶದ ಪರಂಪರೆ ಮತ್ತು ಸಂಸ್ಕೃತಿಯ ಅರಿವಿಲ್ಲ’ ಎಂದು ಬಿಜೆಪಿ ನಾಯಕ ರವಿಶಂಕರ್‌ ಪ್ರಸಾದ್‌ ಟೀಕಿಸಿದ್ದರೆ, ‘ಚಂದ್ರಶೇಖರ್‌ ಅವರ ಹೇಳಿಕೆಯು ಸ್ವೀಕಾರಾರ್ಹವಾದುದಲ್ಲ’ ಎಂದು ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ ಹೇಳಿದ್ದಾರೆ.

‘ಸಚಿವರ ಹೇಳಿಕೆ ಕುರಿತು ಮಾಹಿತಿ ಇಲ್ಲ. ಈ ವಿಚಾರವಾಗಿ ಅವರೊಂದಿಗೆ ಮಾತನಾಡುತ್ತೇನೆ’ ಎಂದು ಮುಖ್ಯಮಂತ್ರಿ ನಿತೀಶ್‌ ತಿಳಿಸಿದ್ದಾರೆ. ಹೇಳಿಕೆ ಕುರಿತು ಕ್ಷಮೆ ಕೇಳುವುದಿಲ್ಲ ಎಂದು ಚಂದ್ರಶೇಖರ್‌ ಸ್ಪಷ್ಟಪಡಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

*
ಚಂದ್ರಶೇಖರ್‌ ಅವರು ಇಸ್ಲಾಂ ಧರ್ಮದ ವಿರುದ್ಧವೂ ಅವಹೇಳನಕಾರಿ ಮಾತುಗಳನ್ನಾಡಲಿ. ಆ ಮೂಲಕ ತಾವು ಗಂಡಸು ಎಂಬುದನ್ನು ನಿರೂಪಿಸಲಿ.
-ಹರಿಭೂಷಣ್‌ ಠಾಕೂರ್‌ ಬಚೌಲ್‌, ಬಿಹಾರ ಬಿಜೆಪಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.