ADVERTISEMENT

ಯುವ ಕಾಂಗ್ರೆಸ್‌ ಕಾರ್ಯಕರ್ತರ ಹತ್ಯೆ: ಸಿಪಿಎಂ ಮಾಜಿ ಶಾಸಕ 20ನೇ ಆರೋಪಿ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2021, 14:52 IST
Last Updated 2 ಡಿಸೆಂಬರ್ 2021, 14:52 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ತಿರುವನಂತಪುರ: ಕಾಸರಗೋಡಿನಲ್ಲಿ ನಡೆದ ಇಬ್ಬರು ಯುವ ಕಾಂಗ್ರೆಸ್‌ ಕಾರ್ಯಕರ್ತರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಎಂ ಮಾಜಿ ಶಾಸಕ ಕೆ.ವಿ. ಕುಂಞಿರಾಮನ್ ಅವರನ್ನು 20ನೇ ಆರೋಪಿಯಾಗಿ ಸಿಬಿಐ ಹೆಸರಿಸಿದೆ.

ನ್ಯಾಯಾಲಯದ ಆದೇಶದ ಅನ್ವಯ ಈ ಪ್ರಕರಣದ ತನಿಖೆಯನ್ನು ಸಿಬಿಐ ಈಚೆಗೆ ಕೈಗೆತ್ತಿಕೊಂಡಿದ್ದು, ಸಿಪಿಎಂನ ಸ್ಥಳೀಯ ಮುಖಂಡರು ಸೇರಿದಂತೆ ಒಂಬತ್ತು ಆರೋಪಿಗಳನ್ನು ಹೊರತುಪಡಿಸಿ, ಕುಂಞಿರಾಮನ್‌ ಅವರನ್ನೂ ಆರೋಪಿಗಳ ಪಟ್ಟಿಗೆ ಸೇರಿಸಲು ನಿರ್ಧರಿಸಿದೆ.

ಹತ್ಯೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂಬ ಹಿಂದಿನ ನಿಲುವನ್ನೇ ಪಕ್ಷದ ಜಿಲ್ಲಾ ನೇತೃತ್ವವು ಪುನರುಚ್ಚರಿಸಿದೆ. ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂಬ ಅರ್ಜಿಯನ್ನು ಈ ಹಿಂದೆ ಕೇರಳದ ಎಡರಂಗ ಸರ್ಕಾರವು ವಿರೋಧಿಸಿತ್ತು.

ADVERTISEMENT

ಹತ್ಯೆ ನಡೆಸಿದವರಿಗೆ ಕುಂಞಿರಾಮನ್‌ ಅವರು ಸಹಾಯ ಮಾಡಿರುವುದಾಗಿ ತಿಳಿದು ಬಂದಿದೆ ಎಂದು ಮೂಲಗಳು ತಿಳಿಸಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಎಂ ಬ್ರಾಂಚ್‌ ಕಾರ್ಯದರ್ಶಿ ರಾಜೇಶ್‌ ಸೇರಿದಂತೆ ಐವರನ್ನು ಸಿಬಿಐ ಬುಧವಾರ ಬಂಧಿಸಿದೆ.

ಯುವ ಕಾಂಗ್ರೆಸ್‌ ಕಾರ್ಯಕರ್ತರಾದ ಕೃಪೇಶ್‌ ಮತ್ತು ಶರತ್‌ಲಾಲ್‌ ಅವರನ್ನು 2019 ಫೆಬ್ರುವರಿ 17ರಂದು ಗುಂಪೊಂದು ಹತ್ಯೆ ಮಾಡಿತ್ತು. ಪ್ರಕರಣದ ತನಿಖೆ ನಡೆಸಿದ್ದ ಕೇರಳ ಪೊಲೀಸರು 14 ಮಂದಿಯ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.