ನವದೆಹಲಿ (ಪಿಟಿಐ):ದೆಹಲಿಯ ಕುತುಬ್ ಮಿನಾರ್ ಸಂಕೀರ್ಣದಲ್ಲಿ ಪತ್ತೆಯಾದ ಹಿಂದೂ ಮತ್ತು ಜೈನ ವಿಗ್ರಹಗಳ ಪರಿಶೀಲನೆ (ಐಕೋನಗ್ರಫಿ) ನಡೆಸಲಾಗುವುದು ಸಂಸ್ಕೃತಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಸ್ಥಳದ ಉತ್ಖನನ ಮಾಡುವ ಅಥವಾ ಯಾವುದೇ ಧಾರ್ಮಿಕ ಆಚರಣೆ ನಿಲ್ಲಿಸುವ ಯೋಜನೆ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಕುತುಬ್ ಮಿನಾರ್ ಪಕ್ಕದ ಕುವ್ವಾತ್ ಉಲ್ ಇಸ್ಲಾಂ ಮಸೀದಿಯಲ್ಲಿ ಕಂಡುಬರುವ ಎರಡು ಗಣೇಶನ ವಿಗ್ರಹಗಳನ್ನು ಸಂಕೀರ್ಣದಿಂದ ಹೊರಕ್ಕೆ ಸ್ಥಳಾಂತರಿಸುವಂತೆ ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರದ ಅಧ್ಯಕ್ಷ ತರುಣ್ ವಿಜಯ್ ಅವರುಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್ಐ) ಪತ್ರ ಬರೆದ ಕೆಲವು ದಿನಗಳ ನಂತರ, ಈ ಅಭಿಪ್ರಾಯ ಸಂಸ್ಕೃತಿ ಸಚಿವಾಲಯದ ಅಧಿಕಾರಿಯಿಂದ ವ್ಯಕ್ತವಾಗಿದೆ.
ದೇವಾಲಯಗಳ ಕಲ್ಲುಗಳಿಂದ ಮಸೀದಿ ನಿರ್ಮಿಸಿರುವುದರಿಂದ, ಅಂತಹ ವಿಗ್ರಹಗಳು ಸುತ್ತಲೂ ಕಾಣಬಹುದಾಗಿದೆ. ಸದ್ಯಕ್ಕೆ ಆ ವಿಗ್ರಹಗಳನ್ನು ಪುನರ್ ಪ್ರತಿಷ್ಠಾಪಿಸುವಅಥವಾ ಬೇರೆಡೆ ಸ್ಥಳಾಂತರಿಸುವ ಯೋಜನೆ ಇಲ್ಲ. ಆದರೆ, ಆ ವಿಗ್ರಹಗಳನ್ನು ಸಂರಕ್ಷಿಸಿ, ಪ್ರದರ್ಶನಕ್ಕಿಡುವ ಉದ್ದೇಶ ಪರಿಶೀಲನೆಯಲ್ಲಿದೆ ಎಂದು ಅವರು ಹೇಳಿದರು.
ಕುತುಬ್ ಮಿನಾರ್ ಸಂಕೀರ್ಣದಲ್ಲಿ ಉತ್ಖನನ ನಡೆಸಲು ಸಚಿವಾಲಯವು ಎಎಸ್ಐಗೆ ಆದೇಶ ನೀಡಿದೆ ಎಂಬ ವರದಿಗಳಿಂದ ವಿವಾದ ಭುಗಿಲೆದ್ದಿದೆ. ಸಂಸ್ಕೃತಿ ಸಚಿವ ಜಿ.ಕಿಶನ್ ರೆಡ್ಡಿ ಅವರು ಈ ವರದಿ ನಿರಾಕರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.