ADVERTISEMENT

ದೆಹಲಿಯ ಸೈಯದ್ ಫೈಜ್‌ ಇಲಾಹಿ ಮಸೀದಿ ಬಳಿ ಒತ್ತುವರಿ ತೆರವು:ಕಲ್ಲುತೂರಾಟ, ಐವರ ಸೆರೆ

ದೆಹಲಿ ರಾಮಲೀಲಾ ಮೈದಾನದ ಸೈಯದ್ ಫೈಜ್‌ ಇಲಾಹಿ ಮಸೀದಿ ಬಳಿ ಕಾರ್ಯಾಚರಣೆ

ಪಿಟಿಐ
Published 7 ಜನವರಿ 2026, 14:54 IST
Last Updated 7 ಜನವರಿ 2026, 14:54 IST
ದೆಹಲಿಯ ರಾಮಲೀಲಾ ಮೈದಾನದ ಬಳಿ ಸೈಯದ್‌ ಫೈಜ್‌ ಇಲಾಹಿ ಮಸೀದಿ ಬಳಿ ದೆಹಲಿ ಮಹಾನಗರ ಪಾಲಿಕೆ ವತಿಯಿಂದ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಿತು
– ಪಿಟಿಐ ಚಿತ್ರ
ದೆಹಲಿಯ ರಾಮಲೀಲಾ ಮೈದಾನದ ಬಳಿ ಸೈಯದ್‌ ಫೈಜ್‌ ಇಲಾಹಿ ಮಸೀದಿ ಬಳಿ ದೆಹಲಿ ಮಹಾನಗರ ಪಾಲಿಕೆ ವತಿಯಿಂದ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಿತು – ಪಿಟಿಐ ಚಿತ್ರ   

ನವದೆಹಲಿ: ದೆಹಲಿಯ ರಾಮಲೀಲಾ ಮೈದಾನ ಪ್ರದೇಶದಲ್ಲಿರುವ ಸೈಯದ್ ಫೈಜ್‌ ಇಲಾಹಿ ಮಸೀದಿ ಸಮೀಪ ಬುಧವಾರ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ನಡೆದ ಕಲ್ಲು ತೂರಾಟದಲ್ಲಿ ಐವರು ಪೊಲೀಸರು ಗಾಯಗೊಂಡಿದ್ದಾರೆ. ಎಫ್‌ಐಆರ್ ದಾಖಲಿಸಿರುವ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ದೆಹಲಿ ಹೈಕೋರ್ಟ್‌ ಸೂಚನೆಯಂತೆ, ಮಸೀದಿಗೆ ಹೊಂದಿಕೊಂಡಿರುವ ಜಾಗ ಮತ್ತು ತುರ್ಕ್‌ಮಾನ್‌ ಗೇಟ್ ಹತ್ತಿರದ ಸ್ಮಶಾನದಲ್ಲಿನ ಒತ್ತುವರಿ ತೆರವು ಕಾರ್ಯವನ್ನು ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಬುಧವಾರ ಬೆಳಿಗ್ಗೆ ಕೈಗೆತ್ತಿಕೊಂಡಿತ್ತು. ಜೆಸಿಬಿ ಕಾರ್ಯಾಚರಣೆ ಆರಂಭಿಸುತ್ತಿದ್ದಂತೆ ಕೆಲವು ಕಿಡಿಗೇಡಿಗಳು ಎಂಸಿಡಿ ಸಿಬ್ಬಂದಿ, ಪೊಲೀಸರತ್ತ  ಕಲ್ಲು ತೂರಾಟ ಆರಂಭಿಸಿದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. 

‘ಎಂಸಿಡಿ ಮನವಿಯಂತೆ ತೆರವು ಕಾರ್ಯಕ್ಕೆ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು. ಮಸೀದಿ ಸಮೀಪದ ಸ್ಥಳದಲ್ಲಿ ಜೆಸಿಬಿ ಕಾರ್ಯಾಚರಣೆ ಆರಂಭಿಸುತ್ತಿದ್ದಂತೆ, 100ರಿಂದ 150ರಷ್ಟು ಜನರು ಸ್ಥಳದಲ್ಲಿ ಜಮಾಯಿಸಿದರು. ಕೆಲವು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದ, ಪರಿಸ್ಥಿತಿ ನಿಯಂತ್ರಿಸಲು ಅಶ್ರುವಾಯು ಸಿಡಿಸಿ ಗುಂಪು ಚದುರಿಸಲಾಯಿತು’ ಎಂದು ಡಿಸಿಪಿ ನಿಧಿನ್‌ ವಲ್ಸನ್‌ ತಿಳಿಸಿದ್ದಾರೆ. 

ADVERTISEMENT

ಒತ್ತುವರಿ ಮಾಡಿಕೊಂಡಿದ್ದ ಪ್ರದೇಶದಲ್ಲಿ ಒಂದು ಡಯಾಗ್ನಾಸ್ಟಿಕ್‌ ಕೇಂದ್ರ, ಮದುವೆ ಸಭಾಂಗಣ, ಆವರಣ ಗೋಡೆ ಇತ್ತು. ಎಲ್ಲವನ್ನೂ ತೆರವು ಮಾಡಲಾಗಿದೆ. ಕಟ್ಟಡದ ಅವಶೇಷ ಸೇರಿ 200ರಿಂದ 250 ಲೋಡ್‌ನಷ್ಟು ಕಸವನ್ನು ಲಾರಿಗಳ ಮೂಲಕ ಹೊರಗೆ ಸಾಗಿಸಲಾಗಿದೆ ಎಂದು ಎಂಸಿಡಿ ಹೇಳಿದೆ. 

‘ಮಂಗಳವಾರ ತಡರಾತ್ರಿಯಿಂದಲೇ ಒತ್ತುವರಿ ಕಾರ್ಯಾಚರಣೆ ನಡೆಯುತ್ತಿತ್ತು. ಬುಧವಾರ ಬೆಳಿಗ್ಗೆ ಹೊತ್ತಿಗೆ ಮಸೀದಿಯನ್ನು ಕೆಡವಲಾಗುತ್ತಿದೆ ಎಂಬ ವದಂತಿ ಹರಡಿತು’ ಎಂದು ರಿಕ್ಷಾ ಚಾಲಕರೊಬ್ಬರು ಹೇಳಿದರು. ‘ತೆರವು ಮಾಡಲಾದ ಜಾಗವು ಮಸೀದಿಗೆ ಸೇರಿದ ಸ್ಮಶಾನವಾಗಿದೆ’ ಎಂದು ಸ್ಥಳೀಯರೊಬ್ಬರು ಹೇಳಿದರು.

ಕಾರ್ಯಾಚರಣೆ ಪೂರ್ವದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಎಂಸಿಡಿ ಸಿಬ್ಬಂದಿ ಅಮನ್‌ ಕಮಿಟಿ ಸದಸ್ಯರ ಜತೆಗೆ ಮಾತುಕತೆ ನಡೆಸಿದ್ದರು. ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಗೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗಿತ್ತು.

ದೆಹಲಿಯ ರಾಮಲೀಲಾ ಮೈದಾನದ ಬಳಿ ಸೈಯದ್‌ ಫೈಜ್‌ ಇಲಾಹಿ ಮಸೀದಿ ಬಳಿ ದೆಹಲಿ ಮಹಾನಗರ ಪಾಲಿಕೆ ವತಿಯಿಂದ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಿತು – ಪಿಟಿಐ ಚಿತ್ರ
ದೆಹಲಿ ಹೈಕೋರ್ಟ್‌ ಸೂಚನೆಯಂತೆ ಕಾರ್ಯಾಚರಣೆ ನಡೆಯಿತು. ಒತ್ತುವರಿ ಮಾಡಿಕೊಂಡಿದ್ದ 36 ಸಾವಿರ ಚದರ ಅಡಿ ಪ್ರದೇಶವನ್ನು ವಶಕ್ಕೆ ಪಡೆಯಲಾಗಿದೆ.
ವಿವೇಕ್‌ ಕುಮಾರ್‌ ದೆಹಲಿ ಮಹಾನಗರ ಪಾಲಿಕೆ ಉಪ ಆಯುಕ್ತ

‘ಮಸೀದಿಗೆ ಹಾನಿ ಆಗಿಲ್ಲ’

ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಮಸೀದಿಗೆ ಯಾವುದೇ ಹಾನಿ ಆಗಿಲ್ಲ ಎಂದು ದೆಹಲಿ ಪೊಲೀಸರು ಮತ್ತು ಎಂಸಿಡಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ‘ಕಲ್ಲು ತೂರಾಟದ ಬೆನ್ನಲ್ಲೇ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಈಗ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ. ಸಮೀಪದ ಕಟ್ಟಡಗಳ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.