ADVERTISEMENT

ದೆಹಲಿ ಅಬಕಾರಿ ಹಗರಣ: ಇ.ಡಿಯಿಂದ ಪಂಜಾಬ್ ಮೂಲದ ಉದ್ಯಮಿ ಬಂಧನ

ಪಿಟಿಐ
Published 8 ಫೆಬ್ರುವರಿ 2023, 7:37 IST
Last Updated 8 ಫೆಬ್ರುವರಿ 2023, 7:37 IST
   

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ) ಪಂಜಾಬ್ ಮೂಲದ ಉದ್ಯಮಿ ಗೌತಮ್ ಮಲ್ಹೋತ್ರಾನನ್ನು ಬಂಧಿಸಿದೆ.

ಪಂಜಾಬ್‌ನ ಓಯಸಿಸ್ ಸಮೂಹದ ಜತೆ ನಂಟು ಹೊಂದಿರುವ ಮಲ್ಹೋತ್ರಾನನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಮಲ್ಹೋತ್ರಾನನ್ನು ದೆಹಲಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ನೀಡುವಂತೆ ಇ.ಡಿ ಕೋರಲಿದೆ.

ADVERTISEMENT

ಪಂಜಾಬ್ ಹಾಗೂ ಇತರೆ ಪ್ರದೇಶಗಳಲ್ಲಿ ಮದ್ಯ ಅಕ್ರಮ ವ್ಯವಹಾರದಲ್ಲಿ ಮಲ್ಹೋತ್ರಾ ಭಾಗಿಯಾಗಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮತ್ತೊಂದೆಡೆ ದೆಹಲಿ ಅಬಕಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಮೂಲದ ಚಾರ್ಟೆಡ್ ಅಕೌಂಟೆಂಟ್‌ ಬುಚ್ಚಿಬಾಬು ಗೊರಂಟ್ಲಾನನ್ನು ಕೇಂದ್ರ ತನಿಖಾ ದಳ (ಸಿಬಿಐ) ಬಂಧಿಸಿದೆ.

ಅಬಕಾರಿ ಹಗರಣದಲ್ಲಿ ವಿಚಾರಣೆಗಾಗಿ ದೆಹಲಿಗೆ ಬರುವಂತೆ ಬಿಆರ್‌ಎಸ್‌ನ ವಿಧಾನ ಪರಿಷತ್‌ ಸದಸ್ಯೆ ಕೆ.ಕವಿತಾ ಅವರ ಲೆಕ್ಕ ಪರಿಶೋಧಕನಿಗೆ ಸಿಬಿಐ ಸೂಚನೆ ನೀಡಿತ್ತು. ಆದರೆ ತನಿಖೆಗೆ ಸಹಕಾರ ನೀಡದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.