ನವದೆಹಲಿ: ದೆಹಲಿ ಸರ್ಕಾರವು ಸದ್ಯಕ್ಕೆ ಹೊಸ ಅಬಕಾರಿ ನೀತಿಯನ್ನು ಹಿಂಪಡೆಯಲು ನಿರ್ಧರಿಸಿದ್ದು, ಸರ್ಕಾರಿ ಮಾರಾಟ ಮಳಿಗೆಗಳ ಮೂಲಕ ಮದ್ಯ ಮಾರಾಟಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
‘ಗುಜರಾತ್ನಲ್ಲಿ ಅಕ್ರಮ ಮದ್ಯದ ವ್ಯಾಪಾರ ನಡೆಯುತ್ತಿದೆ. ಈಗ ದೆಹಲಿಯಲ್ಲೂ ಅದನ್ನು ಮಾಡಲು ಬಯಸಿದ್ದಾರೆ’ಎಂದು ಬಿಜೆಪಿಯನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದರು.
ಅಬಕಾರಿ ಖಾತೆಯನ್ನು ಹೊಂದಿರುವ ಉಪಮುಖ್ಯಮಂತ್ರಿ ಸಿಸೋಡಿಯಾ, ಈಗ ಸರ್ಕಾರಿ ಮದ್ಯದಂಗಡಿಗಳ ಮೂಲಕ ಮಾತ್ರ ಮದ್ಯ ಮಾರಾಟವಾಗುವುದನ್ನು ಖಚಿತಪಡಿಸಿಕೊಳ್ಳಲು ದೆಹಲಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ ಮತ್ತು ಯಾವುದೇ ಗೊಂದಲವಿಲ್ಲ ಎಂದು ಹೇಳಿದರು.
ಮದ್ಯದ ಪರವಾನಗಿ ನೀಡುವ ಅಧಿಕಾರಿಗಳಿಗೆ ಬೆದರಿಕೆ ಹಾಕಲು ಬಿಜೆಪಿಯು ಸಿಬಿಐ ಮತ್ತು ಇ.ಡಿ ಯಂತಹ ತನಿಖಾ ಸಂಸ್ಥೆಗಳನ್ನು ಬಳಸುತ್ತಿದೆ ಎಂದು ಅವರು ಆರೋಪಿಸಿದರು. ಅವರಲ್ಲಿ ಅನೇಕರು ಈಗ ಅಂಗಡಿಗಳನ್ನು ಮುಚ್ಚಿದ್ದಾರೆ ಚಿಲ್ಲರೆ ಪರವಾನಗಿಗಳ ಬಹಿರಂಗ ಹರಾಜನ್ನು ಪ್ರಾರಂಭಿಸಲು ಅಬಕಾರಿ ಅಧಿಕಾರಿಗಳು ಹೆದರುತ್ತಿದ್ದಾರೆ ಎಂದು ದೂರಿದರು. .
‘ಅವರು(ದೆಹಲಿ) ಗುಜರಾತ್ನಲ್ಲಿ ಮಾಡುತ್ತಿರುವಂತೆ ದೆಹಲಿಯಲ್ಲೂ ಅಕ್ರಮ ಮದ್ಯದ ವ್ಯಾಪಾರವನ್ನು ನಡೆಸುವ ಉದ್ದೇಶದಿಂದ ಮದ್ಯದ ಕೊರತೆಯನ್ನು ಸೃಷ್ಟಿಸಲು ಬಯಸುತ್ತಿದ್ದಾರೆ. ಆದರೆ, ನಾವು ಅದನ್ನು ಮಾಡಲು ಬಿಡುವುದಿಲ್ಲ’ ಎಂದು ಸಿಸೋಡಿಯಾ ಹೇಳಿದರು.
ಹೊಸ ಅಬಕಾರಿ ನೀತಿಯ ಅಡಿಯಲ್ಲಿ, ಪ್ರಸ್ತುತ ದೆಹಲಿಯಲ್ಲಿ ಸುಮಾರು 468 ಮದ್ಯದಂಗಡಿಗಳು ಕಾರ್ಯಾಚರಿಸುತ್ತಿವೆ. ಪ್ರತಿ ಎರಡು ತಿಂಗಳ ಅವಧಿಗೆ ಏಪ್ರಿಲ್ 30 ರ ನಂತರ ಎರಡು ಬಾರಿ ವಿಸ್ತರಿಸಲಾದ ನೀತಿಯು ಜುಲೈ 31 ರಂದು ಕೊನೆಗೊಳ್ಳುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.