ADVERTISEMENT

ದೆಹಲಿ ಆಸ್ಪತ್ರೆಯಲ್ಲಿ ಮಲಯಾಳ ಬಳಸದಂತೆ ಸುತ್ತೋಲೆ; ಕ್ಷಮೆಯಾಚಿಸಿದ ಅಧಿಕಾರಿ

ಪಿಟಿಐ
Published 9 ಜೂನ್ 2021, 8:04 IST
Last Updated 9 ಜೂನ್ 2021, 8:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೆಲಸದ ಸಮಯದಲ್ಲಿ ದಾದಿಯರು ಮಲಯಾಳ ಭಾಷೆ ಬಳಸಬಾರದೆಂದು ಸುತ್ತೋಲೆ ಹೊರಡಿಸಿದ್ದ ದೆಹಲಿಯ ಜಿಬಿಪಂಥ್‌ ಆಸ್ಪತ್ರೆಯ ನರ್ಸಿಂಗ್ ಅಧೀಕ್ಷಕರು ಕ್ಷಮೆಯಾಚಿಸಿದ್ದಾರೆ. ಯಾವುದೇ ಭಾರತೀಯ ಭಾಷೆ, ಪ್ರದೇಶ ಮತ್ತು ಧರ್ಮಕ್ಕೆ ಅಗೌರವ ತರುವ ಉದ್ದೇಶದಿಂದ ಸುತ್ತೋಲೆ ಹೊರಡಿಸಿಲ್ಲ ಎಂದು ಹೇಳಿದ್ದಾರೆ.

‘ಆಸ್ಪತ್ರೆ ಆಡಳಿತ ಮತ್ತು ದೆಹಲಿ ಸರ್ಕಾರಕ್ಕೆ ಈ ಬಗ್ಗೆ ತಿಳಿದಿರಲಿಲ್ಲ. ಸದ್ಯ ಈ ಆದೇಶವನ್ನು ಹಿಂಪಡೆಯಲಾಗಿದೆ’ ಎಂದು ಆಸ್ಪತ್ರೆ ತಿಳಿಸಿದೆ.

ಈ ಸಂಬಂಧ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಿಗೆ ಪತ್ರ ಬರೆದಿರುವ ನರ್ಸಿಂಗ್‌ ಅಧೀಕ್ಷಕರು, ‘ ಮಲಯಾಳ ಭಾಷೆ ಮಾತನಾಡುವ ದಾದಿಯರ ವಿರುದ್ಧ ಯಾವುದೇ ಕೆಟ್ಟ ಉದ್ದೇಶವಿರಲಿಲ್ಲ. ಸಕಾರಾತ್ಮಕ ಭಾವನೆಯಿಂದ ಈ ಸುತ್ತೋಲೆಯನ್ನು ಹೊರಡಿಸಲಾಗಿತ್ತು. ಸುತ್ತೋಲೆಯನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ವಿವರಿಸುವ ಅವಕಾಶವೂ ನನಗೆ ಸಿಕ್ಕಿರಲಿಲ್ಲ. ಮೇ 31, ಜೂನ್‌ 1 ಮತ್ತು ಜೂನ್‌ 2ರಂದು ಕೇಳಿ ಬಂದ ದೂರುಗಳ ಆಧಾರದ ಮೇಲೆ ಈ ಕ್ರಮವನ್ನು ಕೈಗೊಳ್ಳಲಾಗಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಆಸ್ಪತ್ರೆಯ ಹೆಚ್ಚಿನ ರೋಗಿ ಮತ್ತು ಸಿಬ್ಬಂದಿಗೆ ಮಲಯಾಳ ತಿಳಿದಿಲ್ಲ. ಆದರೂ ಜಿಐಪಿಎಂಇಆರ್‌ನಲ್ಲಿ ಕೆಲಸದ ಸಮಯದಲ್ಲಿ ಹೆಚ್ಚಿನ ದಾದಿಯರು ಮಲಯಾಳ ಭಾಷೆ ಉಪಯೋಗಿಸುತ್ತಿದ್ದಾರೆ. ಇದರಿಂದ ಆಸ್ಪತ್ರೆಯ ಇತರೆ ಸಿಬ್ಬಂದಿ ಮತ್ತು ರೋಗಿಗಳಿಗೆ ತೊಂದರೆ ಉಂಟಾಗುತ್ತಿದೆ ಎಂಬ ದೂರ ಬಂದಿತ್ತು. ಭಾಷೆಯಿಂದ ಯಾವುದೇ ಗೊಂದಲ ಉಂಟಾಗಬಾರದು ಎಂಬ ಕಾರಣಕ್ಕೆ ಸುತ್ತೋಲೆ ಹೊರಡಿಸಲಾಗಿತ್ತು’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಕೆಲಸದ ಸಮಯದಲ್ಲಿ ಮಲಯಾಳ ಭಾಷೆ ಬಳಸಬಾರದು. ಕೇವಲ ಹಿಂದಿಮತ್ತು ಇಂಗ್ಲಿಷ್‌ ಭಾಷೆಯನ್ನು ಉಪಯೋಗಿಸಬೇಕು. ಇಲ್ಲವಾದ್ದಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಈಚೆಗೆ ಸುತ್ತೋಲೆ ಹೊರಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.