ADVERTISEMENT

ದೆಹಲಿ ಹಿಂಸಾಚಾರ: ಮತ್ತೆ 4 ಮೃತದೇಹ ಪತ್ತೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2020, 20:06 IST
Last Updated 1 ಮಾರ್ಚ್ 2020, 20:06 IST
ಗಲಭೆ ಸಂದರ್ಭ ವಾಹನಗಳಿಗೆ ಬೆಂಕಿ ಹಚ್ಚಿರುವುದು
ಗಲಭೆ ಸಂದರ್ಭ ವಾಹನಗಳಿಗೆ ಬೆಂಕಿ ಹಚ್ಚಿರುವುದು   

ನವದೆಹಲಿ: ಹಿಂಸಾಚಾರಕ್ಕೆ ತುತ್ತಾದ ಈಶಾನ್ಯ ದೆಹಲಿಯ ಗೋಕಲ್‌ಪುರಿ ಮತ್ತು ಶಿವವಿಹಾರ್‌ನ ಚರಂಡಿಯಲ್ಲಿ ನಾಲ್ಕು ಮೃತದೇಹಗಳು ಭಾನುವಾರ ಸಿಕ್ಕಿವೆ.ಮೂರು ದೇಹಗಳು ಗೋಕಲ್‌ಪುರಿಯ ಎರಡು ಚರಂಡಿಗಳಲ್ಲಿ ಸಿಕ್ಕಿದರೆ ಮತ್ತೊಂದು ದೇಹವು ಶಿವವಿಹಾರ್‌ನ ಚರಂಡಿಯಲ್ಲಿ ಸಿಕ್ಕಿದೆ.

ಈ ನಾಲ್ವರು ಗಲಭೆಯಲ್ಲಿ ಮೃತಪಟ್ಟವರೇ ಎಂಬುದನ್ನು ಅಧಿಕಾರಿಗಳು ದೃಢಪಡಿಸಿಲ್ಲ. ಹಾಗಾಗಿ, ಗಲಭೆಗೆ ಬಲಿಯಾದವರ ಸಂಖ್ಯೆಗೆ ಇವರನ್ನು ಸೇರಿಸಲಾಗಿಲ್ಲ. ಗಲಭೆಯಲ್ಲಿ ಮೃತರಾದವರ ಸಂಖ್ಯೆ ಶನಿವಾರ 42ಕ್ಕೆ ಏರಿತ್ತು.

ಗಲಭೆಯಲ್ಲಿ ಮೃತರಾದ ಹಲವರ ದೇಹಗಳು ಚರಂಡಿಯಲ್ಲಿಯೇ ಸಿಕ್ಕಿದ್ದವು. ಗುಪ್ತಚರ ಬ್ಯೂರೊ ಅಧಿಕಾರಿ ಅಂಕಿತ್‌ ಶರ್ಮಾ ಅವರ ದೇಹ ಕೂಡ ಚರಂಡಿಯಲ್ಲಿಯೇ ಸಿಕ್ಕಿತ್ತು.

ADVERTISEMENT

ಪಶ್ಚಿಮ ದೆಹಲಿಯ ಕೆಲ ಭಾಗಗಳಲ್ಲಿ ಹಿಂಸಾಚಾರ ಆರಂಭವಾಗಿದೆ ಎಂಬ ವದಂತಿ ಭಾನುವಾರ ಸಂಜೆ ತಲ್ಲಣ ಸೃಷ್ಟಿಸಿತ್ತು. ದೆಹಲಿ ಮೆಟ್ರೊದ ಏಳು ನಿಲ್ದಾಣಗಳಲ್ಲಿ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಬಂದ್‌ ಮಾಡಲಾಗಿತ್ತು. ಇದಕ್ಕೆ ಯಾವುದೇ ಕಾರಣ ಕೊಟ್ಟಿರಲಿಲ್ಲ. ಪಶ್ಚಿಮ ದೆಹಲಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದರು.

ಎಟಿಎಂಗಳಲ್ಲಿ ಹಣವಿಲ್ಲ: ಈಶಾನ್ಯ ದೆಹಲಿಯ ಕೆಲ ಭಾಗಗಳ ಎಟಿಎಂಗಳಲ್ಲಿ ನಗದು ದೊರೆಯುತ್ತಿಲ್ಲ. ಗಲಭೆಯ ಸಂದರ್ಭದಲ್ಲಿ ಎಟಿಎಂಗಳನ್ನು ಮುಚ್ಚಲಾಗಿತ್ತು.

ಯಮುನಾ ವಿಹಾರದಲ್ಲಿರುವ ಹಲವು ಎಟಿಎಂಗಳು ಫೆಬ್ರುವರಿ 23ರಿಂದಲೇ ಬಂದ್‌ ಆಗಿವೆ ಎಂದು ಜಾಫರಾಬಾದ್‌ನ ನಿವಾಸಿ ಅದಿಲ್‌ ಖಾನ್‌ ಎಂಬವರು ಹೇಳಿದ್ದಾರೆ. ‘ಎಟಿಎಂಗಳು ತೆರೆದಿಲ್ಲದ ಕಾರಣ ಜನರಲ್ಲಿ ನಗದು ಇಲ್ಲ. ಹಾಗಾಗಿ, ವ್ಯಾಪಾರಕ್ಕೆ ಭಾರಿ ಹೊಡೆತ ಬಿದ್ದಿದೆ’ ಎಂದು ಮೊಹಮ್ಮದ್‌ ಆಲಂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.