ನವದೆಹಲಿ: ರಾಜ್ಯವೊಂದು ಉಪಮುಖ್ಯಮಂತ್ರಿಯನ್ನು ನೇಮಕ ಮಾಡುವುದು ಸಂವಿಧಾನಬಾಹಿರ ಕ್ರಮ ಅಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದ್ದು, ಡಿಸಿಎಂಗಳ ನೇಮಕವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠವು, ‘ಉಪಮುಖ್ಯಮಂತ್ರಿ ಎಂಬುದು ಒಂದು ಹುದ್ದೆಯ ಹೆಸರು ಮಾತ್ರ. ಅವರನ್ನು ಇತರರಿಗಿಂತ ಹಿರಿಯರು ಎಂದು ಪರಿಗಣಿಸುವರೇ ಹೊರತು, ಅಧಿಕ ವೇತನವನ್ನೇನೂ ಪಡೆಯುವುದಿಲ್ಲ’ ಎಂದು ಅರ್ಜಿದಾರರ ಪರ ವಕೀಲರಿಗೆ ತಿಳಿಸಿತು.
‘ಉಪಮುಖ್ಯಮಂತ್ರಿಗಳ ನೇಮಕಾತಿಗೆ ಆಧಾರವೇನು? ಅವರನ್ನು ಕೇವಲ ಧರ್ಮ ಮತ್ತು ಜಾತಿಯ ಆಧಾರದಲ್ಲಿ ನೇಮಕ ಮಾಡಲಾಗುತ್ತದೆ. ಬೇರೆ ಯಾವುದೇ ಆಧಾರ ಇರುವುದಿಲ್ಲ. ಇದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗಿದೆ’ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ಉಪಮುಖ್ಯಮಂತ್ರಿಯು ಒಬ್ಬ ಶಾಸಕ ಮತ್ತು ಸಚಿವ ಆಗಿರುವನು. ಅದು ಸಂವಿಧಾನಬಾಹಿರ ಹುದ್ದೆ ಅಲ್ಲ. ಅರ್ಜಿದಾರರ ವಾದದಲ್ಲಿ ಯಾವುದೇ ಹುರುಳಿಲ್ಲ. ಆದ್ದರಿಂದ ಅರ್ಜಿಯನ್ನು ತಿರಸ್ಕರಿಸಲಾಗಿದೆ’ ಎಂದು ಹೇಳಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.