ಮುಂಬೈ: ಭಾರತ್ ಜೋಡೊ ಯಾತ್ರೆಯಲ್ಲಿ ಬುಧವಾರ ರಾತ್ರಿ ಭಾರತದ ರಾಷ್ಟ್ರಗೀತೆ ಬದಲಿಗೆ ನೇಪಾಳದ ರಾಷ್ಟ್ರಗೀತೆ ಕೇಳಿಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅನ್ನು ಬಿಜೆಪಿ ಮುಖಂಡರು ಟೀಕಿಸಿದ್ದಾರೆ.
ಮಹಾರಾಷ್ಟ್ರದ ವಾಶಿಮ್ನಲ್ಲಿ ಬುಧವಾರ ರಾತ್ರಿ ರಾಹುಲ್ ಗಾಂಧಿ ಅವರ ಭಾಷಣ ಇತ್ತು. ಭಾಷಣ ಮುಗಿದ ಬಳಿಕ, ರಾಹುಲ್ ಅವರು ‘ಈಗ ರಾಷ್ಟ್ರಗೀತೆ ಹಾಕಲಿದ್ದಾರೆ’ ಎಂದು ವೇದಿಕೆಯಲ್ಲಿ ನಿಂತುಕೊಂಡರು. ಆದರೆ, ಭಾರತದ ರಾಷ್ಟ್ರಗೀತೆ ಬದಲಿಗೆ, ನೇಪಾಳದ ರಾಷ್ಟ್ರಗೀತೆ ಕೇಳಿಬಂದಿತು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು ಎಂದು ಎನ್ಡಿಟಿವಿ ವರದಿ ಮಾಡಿದೆ.
ವೇದಿಕೆಯಲ್ಲಿ ನಿಂತಿದ್ದ ರಾಹುಲ್ ಸೇರಿದಂತೆ ಹಲವು ಮುಖಂಡರು ಒಂದು ಕ್ಷಣ ಅವಕ್ಕಾದರು. ಮಹಾರಾಷ್ಟ್ರದ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರು ಮೊಬೈಲ್ನಲ್ಲಿ ಹಾಡು ಹಾಕಿದ ವ್ಯಕ್ತಿಯನ್ನು ಕರೆದು, ಹಾಡನ್ನು ನಿಲ್ಲಿಸುವಂತೆ ಹೇಳಿದರು. ನಂತರ ಭಾರತದ ರಾಷ್ಟ್ರಗೀತೆಯನ್ನು ಹಾಕಲಾಯಿತು.
ಬಿಜೆಪಿ ಟೀಕೆ: ಕಾಂಗ್ರಸ್ ನಾಯಕ ರಾಹುಲ್ ಅವರು ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ತಮಿಳುನಾಡಿನ ಬಿಜೆಪಿ ಮುಖಂಡ ಅಮರ್ ಪ್ರಸಾದ್ ರೆಡ್ಡಿ ಅವರು ವಿಡಿಯೊವನ್ನು ಟ್ವೀಟ್ ಮಾಡಿ, ‘ರಾಹುಲ್ ಗಾಂಧಿ, ಏನಿದು?’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.