ಲಖನೌ:ನಾಯಿಯೊಂದು ನೆರೆಮನೆಯ ವ್ಯಕ್ತಿಯೊಬ್ಬರ ಮರ್ಮಾಂಗಕ್ಕೆ ಕಚ್ಚಿದ್ದು, ಈ ಸಂಬಂಧ ಶ್ವಾನದ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.
‘ನಾಯಿಯ ಮಾಲೀಕ ಶಂಕರ ಪಾಂಡೆ ಎಂಬುವರ ವಿರುದ್ಧ ಐಪಿಸಿ ಸೆಕ್ಷನ್ 289ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಕೃಷ್ಣನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ಅಲೋಕ್ ಕುಮಾರ್ ರಾಯ್ ಶನಿವಾರ ಹೇಳಿದ್ದಾರೆ.
‘ಸಂಕಲ್ಪ್ ನಿಗಂ ಎಂಬುವವರು ಸೆಪ್ಟೆಂಬರ್ 3 ರಂದು ರಾತ್ರಿ 10.30ರ ಸುಮಾರಿಗೆ ಮನೆಗೆ ಬರುತ್ತಿದ್ದರು. ಶಂಕರ್ ಅವರ ನಿವಾಸದ ಬಳಿ ಬಂದಾಗ ನಾಯಿಯು ಸಂಕಲ್ಪ್ ಮೇಲೆ ದಾಳಿ ನಡೆಸಿದೆ. ಅವರ ಮರ್ಮಾಂಗಕ್ಕೆ ಕಚ್ಚಿ ಗಾಯಗೊಳಿಸಿದೆ. ಅವರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಲಾಗಿದೆ’ ಎಂದು ತಿಳಿಸಿದ್ದಾರೆ.
‘ನಾಯಿ ಕಚ್ಚುತ್ತಿದ್ದುದನ್ನು ಕಂಡರೂ ಶಂಕರ್ ನನಗೆ ಸಹಾಯ ಮಾಡಲಿಲ್ಲ. ಗಂಭೀರವಾಗಿ ಗಾಯಗೊಂಡಿದ್ದ ನಾನು ಲೋಕ ಬಂಧು ಆಸ್ಪತ್ರೆಗೆ ತೆರಳಿದೆ. ನನ್ನ ಸ್ಥಿತಿ ಕಂಡ ಅಲ್ಲಿನ ವೈದ್ಯರು ಕೆಜಿಎಂಯು ಆಸ್ಪತ್ರೆಗೆ ದಾಖಲಾಗುವಂತೆ ಸಲಹೆ ನೀಡಿದರು. ಎರಡು ದಿನ ಅಲ್ಲಿ ಚಿಕಿತ್ಸೆ ಪಡೆದೆ. ಸುದೀರ್ಘ ಅವಧಿವರೆಗೂ ಚಿಕಿತ್ಸೆ ನೀಡಬೇಕಾಗುತ್ತದೆ ಎಂದು ವೈದ್ಯರು ಸೂಚಿಸಿದ್ದಾರೆ ಎಂದು ಸಂಕಲ್ಪ್ ದೂರಿನಲ್ಲಿ ಹೇಳಿದ್ದಾರೆ. ಶಂಕರ್ ಅವರು ತಮ್ಮನ್ನು ನಾಯಿ ದಾಳಿಯಿಂದ ಪಾರು ಮಾಡಲಿಲ್ಲ ಎಂದೂ ದೂರಿನಲ್ಲಿ ವಿವರಿಸಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.
‘ಸಂಕಲ್ಪ್ ಮತ್ತು ಶಂಕರ್ ನೆರೆಹೊರೆಯವರು. ಸಂಕಲ್ಪ್ ಆಗಾಗ ಶಂಕರ್ ಮನೆಗೆ ಭೇಟಿ ನೀಡುತ್ತಿದ್ದರು’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.