ADVERTISEMENT

ಜೀವಕ್ಕಿಂತ ಲಾಭ ಗಳಿಕೆ ಮುಖ್ಯವಾಗಬಾರದು: ದೆಹಲಿ ಹೈಕೋರ್ಟ್‌

ಪಿಟಿಐ
Published 20 ಏಪ್ರಿಲ್ 2021, 14:37 IST
Last Updated 20 ಏಪ್ರಿಲ್ 2021, 14:37 IST
ದೆಹಲಿ ಹೈಕೋರ್ಟ್‌
ದೆಹಲಿ ಹೈಕೋರ್ಟ್‌   

ನವದೆಹಲಿ (ಪಿಟಿಐ‌): ಅಮೂಲ್ಯ ಜೀವಗಳನ್ನು ರಕ್ಷಿಸುವುದಕ್ಕಿಂತ ಆರ್ಥಿಕವಾಗಿ ಲಾಭ ಗಳಿಸುವುದು ಮುಖ್ಯವಾಗಬಾರದು. ಏ. 22ರವರೆಗೆ ಕಾಯುವ ಬದಲು, ಕೈಗಾರಿಕೆಗಳಲ್ಲಿ ಆಮ್ಲಜನಕ ಬಳಕೆ ಮೇಲೆ ಕೂಡಲೇ ನಿಷೇಧ ಹೇರುವಂತೆ ದೆಹಲಿ ಹೈಕೋರ್ಟ್‌ ಮಂಗಳವಾರ ಕೇಂದ್ರಕ್ಕೆ ನಿರ್ದೇಶನ ನೀಡಿದೆ.

ದೆಹಲಿಯ ಅನೇಕ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಕೋವಿಡ್‌–19 ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ವಿಪಿನ್‌ ಸಂಘಿ ಹಾಗೂ ರೇಖಾ ಪಳ್ಳಿ ಅವರಿರುವ ನ್ಯಾಯಪೀಠ ಈ ನಿರ್ದೇಶನ ನೀಡಿದೆ.

‘ವಿವಿಧ ಆಸ್ಪತ್ರೆಗಳಲ್ಲಿನ ಆಮ್ಲಜನಕ 4–8 ಗಂಟೆಗಳಲ್ಲಿ ಕೊನೆಗೊಳ್ಳಲಿದೆ. ಇಂಥ ಸಂದರ್ಭದಲ್ಲಿ ಕೈಗಾರಿಕೆಗಳಲ್ಲಿ ಆಮ್ಲಜನಕ ಬಳಕೆಯನ್ನು ಏ. 22ರಿಂದ ನಿಷೇಧಿಸಲಾಗುವುದು ಎಂಬುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ’ ಎಂದೂ ನ್ಯಾಯಪೀಠ ಅಭಿಪ್ರಾಯಪಟ್ಟಿತು.

ADVERTISEMENT

ಆಮ್ಲಜನಕ ಉತ್ಪಾದಿಸುವ ಕಂಪನಿ ಇನಾಕ್ಸ್‌ಗೆ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿತು. ಕೋರ್ಟ್‌ ಆದೇಶವನ್ನು ಪಾಲನೆ ಮಾಡದ ಕಾರಣ ಕಂಪನಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬಾರದೇಕೆ ಎಂದು ಪ್ರಶ್ನಿಸಿದ ಹೈಕೋರ್ಟ್‌, ಏ. 22ರಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಕೋರ್ಟ್‌ಗೆ ಹಾಜರಾಗಬೇಕು ಎಂದೂ ನಿರ್ದೇಶನ ನೀಡಿತು.

ಮುಂದಿನ ವಿಚಾರಣೆ ವೇಳೆ, ಉತ್ತರ ಪ್ರದೇಶ ಸರ್ಕಾರದ ಪ್ರತಿನಿಧಿಯೂ ಹಾಜರಿರಬೇಕು ಎಂದು ನ್ಯಾಯಪೀಠ ಸೂಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.