ನವದೆಹಲಿ: ‘ಪಂಜಾಬ್ ವಿಧಾನಸಭಾ ಚುನಾವಣೆಗೆ ಕೆಲವು ದಿನಗಳ ಮುನ್ನ ಸಂಪುಟ ಸಚಿವ ಸತ್ಯೇಂದ್ರ ಜೈನ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಬಹುದು ಎಂದು ಮೂಲಗಳು ನನಗೆ ಮಾಹಿತಿ ನೀಡಿವೆ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭಾನುವಾರ ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷದ (ಆಪ್) ಮುಖಂಡರು ಮತ್ತು ಕಾರ್ಯಕರ್ತರು ಯಾವುದೇ ತಪ್ಪು ಮಾಡಿಲ್ಲವಾದ್ದರಿಂದ ಅವರು ಇ.ಡಿಗೆ ಹೆದರುವುದಿಲ್ಲ ಎಂದೂ ಕೇಜ್ರಿವಾಲ್ ಹೇಳಿದರು.
‘ಪಂಜಾಬ್ ಚುನಾವಣೆ ನಡೆಯುವ ಕೆಲವು ದಿನಗಳಿಗೂ ಮುನ್ನ ಇ.ಡಿ ದೆಹಲಿ ಆರೋಗ್ಯ ಮತ್ತು ಗೃಹ ಸಚಿವ ಸತ್ಯೇಂದ್ರ ಜೈನ್ ಅವರನ್ನು ಬಂಧಿಸಲಿದೆ ಎಂದು ನಮ್ಮ ಕೆಲವು ಮೂಲಗಳಿಂದ ನಮಗೆ ಮಾಹಿತಿ ದೊರೆತಿದೆ. ಇದಕ್ಕಿಂತ ಮೊದಲೂ ಸತ್ಯೇಂದ್ರ ಜೈನ್ ಅವರಿಗೆ ಸಂಬಂಧಿಸಿದಂತೆ ದಾಳಿ ನಡೆಸಲಾಗಿತ್ತು. ಆದರೆ ಏನೂ ದೊರೆತಿರಲಿಲ್ಲ’ ಎಂದು ಮಾಧ್ಯಮಗೋಷ್ಠಿಯಲ್ಲಿ ಕೇಜ್ರಿವಾಲ್ ಹೇಳಿದರು.
ಬಿಜೆಪಿಗೆ ಯಾವಾಗೆಲ್ಲ ಸೋಲುವ ಭೀತಿ ಕಾಡುತ್ತದೆಯೋ ಅದು ಅನಿವಾರ್ಯವಾಗಿ ತನ್ನ ವಿರೋಧಿಗಳ ಮೇಲೆ ಕೇಂದ್ರ ಸಂಸ್ಥೆಗಳನ್ನು ಪ್ರಯೋಗಿಸುತ್ತದೆ ಎಂದು ಕೇಜ್ರಿವಾಲ್ ಆರೋಪಿಸಿದರು.
‘ಈಗ ಚುನಾವಣೆಗಳು ಇರುವುದರಿಂದ ದಾಳಿ ಮತ್ತು ಬಂಧನಗಳು ನಡೆಯುತ್ತವೆ. ನಾವು ಇಂತಹುದಕ್ಕೆಲ್ಲ ಭಯ ಪಡುವುದಿಲ್ಲ. ಏಕೆಂದರೆ ನಾವು ಯಾವುದೇ ತಪ್ಪು ಮಾಡಿಲ್ಲ’ ಎಂದು ಅವರು ಹೇಳಿದರು. ಫೆಬ್ರುವರಿ 20 ರಂದು ಪಂಜಾಬ್ ವಿಧಾನಸಭೆ ಚುನಾವಣೆ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.