ADVERTISEMENT

ಎನ್‌ಕೌಂಟರ್‌ಗಳ ಗಂಭೀರ ಪರಿಶೀಲನೆ ಅಗತ್ಯ: ‘ಸುಪ್ರೀಂ’

​ಪ್ರಜಾವಾಣಿ ವಾರ್ತೆ
Published 14 ಜನವರಿ 2019, 18:32 IST
Last Updated 14 ಜನವರಿ 2019, 18:32 IST

ನವದೆಹಲಿ: ಉತ್ತರ ಪ್ರದೇಶ ಪೊಲೀಸರು ನಡೆಸಿದ್ದಾರೆ ಎನ್ನಲಾದ ಎನ್‌ಕೌಂಟರ್‌ಗಳು ಮತ್ತು ಹತ್ಯೆಗಳ ಬಗ್ಗೆ ‘ನಿಕಟ ಮತ್ತು ಗಂಭೀರ’ ಪರಿಶೀಲನೆ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಈ ಎನ್‌ಕೌಂಟರ್‌ಗಳ ಬಗ್ಗೆ ನ್ಯಾಯಾಲಯದ ಉಸ್ತುವಾರಿಯಲ್ಲಿ ಸಿಬಿಐ ಅಥವಾ ಎಸ್‌ಐಟಿ (ವಿಶೇಷ ತನಿಖಾ ತಂಡ) ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಗೆ ಒಪ್ಪಿದ ಕೋರ್ಟ್ ಈ ಅಭಿ‍ಪ್ರಾಯ ವ್ಯಕ್ತಪಡಿಸಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠವು ಪಿಯುಸಿಎಲ್‌ ಸಲ್ಲಿಸಿದ ಅರ್ಜಿ ಮತ್ತು ಜತೆಗೆ ಸಲ್ಲಿಸಿದ್ದ ದಾಖಲೆಗಳನ್ನು ಪರಿಶೀಲಿಸಿತು. ಈ ವಿಚಾರದ ‘ಗಂಭೀರ ಪರಿಶೀಲನೆ’ ಅಗತ್ಯ ಎಂದು ಅಭಿಪ‍್ರಾಯಪಟ್ಟು ವಿಚಾರಣೆಯನ್ನು ಫೆಬ್ರುವರಿ 12ಕ್ಕೆ ನಿಗದಿ ಮಾಡಿತು.

ADVERTISEMENT

ರಾಜ್ಯದ ಆಡಳಿತವು ಎಲ್ಲ ನಿಯಮಗಳು ಮತ್ತು ಪ್ರಕ್ರಿಯೆಗಳನ್ನು ಪಾಲಿಸಿದೆ ಎಂದು ಉತ್ತರ ಪ್ರದೇಶ ಸರ್ಕಾರದ ವಕೀಲ ಮುಕುಲ್‌ ರೋಹಟಗಿ ಹೇಳಿದರು.

2017ರಲ್ಲಿ ಉತ್ತರ ಪ್ರದೇಶದಲ್ಲಿ 1,100 ಎನ್‌ಕೌಂಟರ್‌ಗಳು ನಡೆದಿವೆ. ಈ ಎನ್‌ಕೌಂಟರ್‌ಗಳಲ್ಲಿ 49 ಮಂದಿಯ ಹತ್ಯೆಯಾಗಿದೆ. 370 ಮಂದಿ ಗಾಯಗೊಂಡಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ‍ಪೀಠವು ಸೂಚಿಸಿದೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಉಪಮುಖ್ಯಮಂತ್ರಿ ಕೇಶವ ಪ್ರಸಾದ್‌ ಮೌರ್ಯ ಮತ್ತು ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ (ಕಾನೂನು ಹಾಗೂ ಸುವ್ಯವಸ್ಥೆ) ಆನಂದ್‌ ಕುಮಾರ್‌ ಅವರು ಅಪರಾಧಿಗಳ ಎನ್‌ಕೌಂಟರ್‌ ಹತ್ಯೆಗಳನ್ನು ಸಮರ್ಥಿಸಿದ ಮಾಧ್ಯಮ ವರದಿಗಳನ್ನೂ ಪಿಯುಸಿಎಲ್‌ ನ್ಯಾಯಾಲಯಕ್ಕೆ ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.