ತಿರುವನಂತಪುರ: ಸಾಮಾಜಿಕ ಕಾರ್ಯಕರ್ತೆ ದಯಾ ಬಾಯಿ ಮತ್ತು ಎಂಡೋಸಲ್ಫಾನ್ ಸಂತ್ರಸ್ತರ ತಾಯಂದಿರು ಐದು ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆ ಭಾನುವಾರ ಮುಕ್ತಾಯಗೊಂಡಿದೆ. ಸಂತ್ರಸ್ತರ ಬೇಡಿಕೆಗಳನ್ನು ಈಡೇರಿಸುವುದಾಗಿ ಕೇರಳ ಸರ್ಕಾರ ಭರವಸೆ ನೀಡಿದ ನಂತರ ಪ್ರತಿಭಟನೆ ಅಂತ್ಯಗೊಳಿಸಲಾಯಿತು.
2017ರಲ್ಲಿ ಎಂಡೋಸಲ್ಫಾನ್ನಿಂದ ತೊಂದರೆಗೊಳಗಾದ 1905 ವ್ಯಕ್ತಿಗಳ ಪೈಕಿ, ಮಕ್ಕಳನ್ನೂ ಸಂತ್ರಸ್ತರ ಪಟ್ಟಿಯಲ್ಲಿ ಅಧಿಕೃತವಾಗಿ ಸೇರಿಸಲು ಕೇರಳ ಸರ್ಕಾರ ಒಪ್ಪಿದೆ. ಈ ಕುರಿತು ಜಿಲ್ಲಾಧಿಕಾರಿ ಪ್ರಾಥಮಿಕ ಪರಿಶೀಲನೆ ನಡೆಸಲಿದ್ದಾರೆ. ಪಂಚಾಯ್ತಿ ವ್ಯಾಪ್ತಿಯನ್ನು ಗಣನೆಗೆ ತೆಗೆದುಕೊಳ್ಳದೆ ಎಂಡೋಸಲ್ಫಾನ್ ಪೀಡಿತವಾಗಿರುವ ಇಡೀ ಪ್ರದೇಶದಲ್ಲಿನ ಸಂತ್ರಸ್ತರನ್ನು ಪಟ್ಟಿಗೆ ಸೇರಿಸಲು ಸಮ್ಮತಿ ನೀಡಲಾಗಿದೆ.
ವಿವಾದ ಸೃಷ್ಟಿಸಿದ ಸಚಿವೆ
‘ಎಂಡೋಸಲ್ಫಾನ್ ಸಂತ್ರಸ್ತರು, ಮಾನಸಿಕ ಮತ್ತು ದೈಹಿಕ ವೈಕಲ್ಯಕ್ಕೆ ತುತ್ತಾದ ತಮ್ಮ ಮಕ್ಕಳನ್ನು ಸಚಿವಾಲಯ ಕಚೇರಿ ಎದುರು ಕರೆದುಕೊಂಡು ಬಂದು ಸಾಲಾಗಿ ನಿಲ್ಲಿಸಲಿ’ ಎಂದು ಹೇಳುವ ಮೂಲಕ ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ವಿವಾದ ಸೃಷ್ಟಿಸಿದ್ದಾರೆ.
ಸಚಿವೆಯ ಹೇಳಿಕೆಗೆ ಹೋರಾಟಗಾರರು, ವಿವಿಧ ರಾಜಕೀಯ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಅಂಗವಿಕಲ ಮಕ್ಕಳನ್ನು ಸಚಿವಾಲಯ ಕಚೇರಿಗೆ ಕರೆದುಕೊಂಡು ಬರಲಿ ಎಂದು ಸಚಿವೆ ಹೇಳಿರುವುದು ದುರದೃಷ್ಟಕರ. ಇದು ಸಂತ್ರಸ್ತರ ಅಸಹಾಯಕತೆಯನ್ನು ಅಣಕಿಸುವ ಮಾತು’ ಎಂದು ಹೋರಾಟಗಾರ್ತಿ ಸೋನಿಯಾ ಜಾರ್ಜ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.