ನವದೆಹಲಿ: ಪತ್ರಕರ್ತ ರಾಜೀವ್ ಶರ್ಮಾ ವಿರುದ್ಧ ದಾಖಲಾಗಿರುವ ಗೂಢಚರ್ಯೆ ಪ್ರಕರಣವು ಸುಳ್ಳಾಗಿದ್ದು, ದೆಹಲಿ ಪೊಲೀಸರೇ ಅವರ ವಿರುದ್ಧ ‘ಸಾಕ್ಷ್ಯಗಳನ್ನು ಸೃಷ್ಟಿಸಿದ್ದಾರೆ’ ಎಂದು ಶರ್ಮಾ ಪರ ವಕೀಲ ಆದಿಶ್ ಅಗರ್ವಾಲ್ ಭಾನುವಾರ ಹೇಳಿದರು.
ಸೇನೆಯ ನಿಯೋಜನೆ, ಶಸ್ತ್ರಾಸ್ತ್ರ ಖರೀದಿ ಹಾಗೂ ವಿದೇಶಾಂಗ ನೀತಿಗಳ ಕುರಿತು ಚೀನಾ ಗುಪ್ತಚರ ಸಂಸ್ಥೆಗಳಿಗೆ ಮಾಹಿತಿ ರವಾನಿಸುತ್ತಿದ್ದರು ಎನ್ನುವ ಆರೋಪದ ಮೇಲೆ ದೆಹಲಿ ಪೊಲೀಸರು ಶನಿವಾರ ಶರ್ಮಾ ಅವರನ್ನು ಬಂಧಿಸಿದ್ದರು. ಅವರ ಬಳಿ ರಕ್ಷಣಾ ಇಲಾಖೆಗೆ ಸಂಬಂಧಿಸಿದ ರಹಸ್ಯ ದಾಖಲೆಗಳು ಪತ್ತೆಯಾಗಿದ್ದವು ಎಂದು ಪೊಲೀಸರು ತಿಳಿಸಿದ್ದರು.
‘ಸೆ.14ರಂದು ಪೊಲೀಸರು ಶರ್ಮಾ ಅವರನ್ನು ಕಸ್ಟಡಿಗೆ ಪಡೆದಿದ್ದರು. ಅದೇ ದಿನ ರಾತ್ರಿ ನಡೆದ ಮನೆ ಪರಿಶೀಲನೆ ವೇಳೆ ಯಾವುದೇ ದಾಖಲೆಗಳು ಅವರಿಗೆ ಲಭ್ಯವಾಗಿಲ್ಲ. ನಂತರದಲ್ಲಿ ಈ ‘ಸಾಕ್ಷ್ಯ’ಗಳನ್ನು ತಂದು ಮನೆಯಲ್ಲಿ ಇಡಲಾಯಿತು. ಸುಳ್ಳು ಪ್ರಕರಣದಲ್ಲಿ ಶರ್ಮಾ ಅವರನ್ನು ಸಿಲುಕಿಸಲಾಗುತ್ತಿದೆ. ಅವರು ಯಾವುದೇ ಅಕ್ರಮವೆಸಗಿಲ್ಲ. ಶರ್ಮಾ ಅವರನ್ನು ಬಂಧಿಸಿದ ದಿನವೇ ಮಾಧ್ಯಮಗಳಿಗೆ ಪೊಲೀಸರು ಮಾಹಿತಿ ನೀಡಬಹುದಿತ್ತು. ಆದರೆ ಯಾವ ದಾಖಲೆಗಳೂ ಲಭ್ಯವಾಗದ ಕಾರಣ, ಸುಳ್ಳು ಸಾಕ್ಷ್ಯಗಳನ್ನು ಮನೆಯಲ್ಲಿ ಇರಿಸಿ ನಂತರ ಪೊಲೀಸರು ಮಾಹಿತಿ ಬಹಿರಂಗಗೊಳಿಸಿದ್ದಾರೆ’ ಎಂದು ಅಗರ್ವಾಲ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.