ಮುಂಬೈ: ಮಧ್ಯ ಪ್ರದೇಶದ ಖರ್ಗೋನ್ನಲ್ಲಿ ರಾಮ ನವಮಿ ದಿನ ನಡೆದ ಕೋಮು ವೈಷಮ್ಯ ಶ್ರೀರಾಮನ ಆದರ್ಶಕ್ಕೆ ಅವಮಾನ ಮಾಡುವಂಥದ್ದು. ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಈ ಧರ್ಮ ಕಲಹದ ಬೀಜವನ್ನು ಬಿತ್ತುತ್ತಿದೆ ಎಂದು ಶಿವಸೇನಾ ಮುಖಂಡ, ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.
ಶಿವಸೇನಾ ಮುಖವಾಣಿಯಾದ ‘ಸಾಮ್ನಾ’ದಲ್ಲಿ ಈ ಬಗ್ಗೆ ಅವರು ಲೇಖನ ಬರೆದಿದ್ದು, ‘ಖರ್ಗೋನ್ನಲ್ಲಿ ನಡೆದ ಘಟನೆಯಿಂದ ಶ್ರೀರಾಮನೂ ಪ್ರಕ್ಷುಬ್ಧನಾಗುತ್ತಾನೆ. ಚನಾವಣೆಯಲ್ಲಿ ಗೆಲ್ಲಲು ಬಿಜೆಪಿ ದೇಶವನ್ನು ಒಡೆಯುತ್ತಿದೆ. ಯಾರು ಚುನಾವಣೆಯಲ್ಲಿ ಗೆಲ್ಲುವುದಕ್ಕೋಸ್ಕರ ಕೋಮು ವೈಷಮ್ಯದ ಬೆಂಕಿ ಹಚ್ಚುತ್ತಾರೋ, ಅವರು ಎರಡನೇ ಬಾರಿಗೆ ದೇಶವನ್ನು ಒಡೆಯುವ ಪ್ರಯತ್ನಕ್ಕೆ ಬೀಜ ಬಿತ್ತುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.
‘ಈ ಮುಂಚಿನ ರಾಮ ನವಮಿ ಮೆರವಣಿಗೆಗಳು ಸಾಂಸ್ಕೃತಿಕತೆ ಹಾಗೂ ಧಾರ್ಮಿಕತೆಯಿಂದ ಕೂಡಿರುತ್ತಿದ್ದವು. ಆದರೆ ಈಗ ರಾಮ ನವಮಿಯ ಮೆರವಣಿಗೆ ಸಮಯದಲ್ಲಿ ಕೋಮು ವೈಷಮ್ಯವನ್ನು ಹುಟ್ಟುಹಾಕಲಾಗುತ್ತಿದೆ. ರಾಮ ಮಂದಿರ ಚಳವಳಿಯನ್ನು ಮಧ್ಯದಲ್ಲಿ ತೊರೆದು ಹೋದವರು, ಈಗ ರಾಮನ ಹೆಸರಿನಲ್ಲಿ ಕತ್ತಿಯನ್ನು ಪ್ರದರ್ಶಿಸುತ್ತಿದ್ದಾರೆ’ ಎಂದು ಬಿಜೆಪಿಗೆ ಪರೋಕ್ಷವಾಗಿ ಚಾಟಿ ಬೀಸಿದರು.
‘ಹಿಂದೂಗಳ ಹೊಸ ವರ್ಷವಾದ ಗುಡಿ ಪಡುವಾ (ಯುಗಾದಿ) ದಿನದಂದು ಮುಂಬೈ ಸೇರಿದಂತೆ ಮಹರಾಷ್ಟ್ರದ ಹಲವೆಡೆ ಮೆರವಣಿಗೆಗಳನ್ನು ನಡೆಸಲಾಯಿತು. ಅದೂ ಸಹ ಮುಸ್ಲಿಮರ ಬಡಾವಣೆಗಳಲ್ಲಿ ಮೆರವಣಿಗೆಗಳು ನಡೆದಿವೆ. ಆದರೆ ಆ ಸಮಯದಲ್ಲಿ ಯಾವುದೇ ರೀತಿಯ ಕೋಮು ಘರ್ಷಣೆಯಾಗಲಿಲ್ಲ. ಆದರೆ ರಾಮ ನವಮಿಯಲ್ಲಿ ಮಾತ್ರ ಏಕೆ ಕೋಮು ಘರ್ಷಣೆ ನಡೆಯುತ್ತಿದೆ. ಪ್ರಧಾನ ಮಂತ್ರಿ ಹಾಗೂ ಕೇಂದ್ರ ಗೃಹ ಮಂತ್ರಿಗಳ ತವರಿನಲ್ಲಿ ಯಾರಾದರೂ ರಾಮ ನವಮಿ ಮೆರವಣಿಗೆಯ ಮೇಲೆ ಕಲ್ಲು ತೂರಲು ಸಾಧ್ಯವೇ?’ ಎಂದು ರಾವುತ್ ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.