ADVERTISEMENT

ಉಚಿತ ವಿದ್ಯುತ್‌: ನೋಂದಣಿ ಆರಂಭಿಸಿದ ಎಸ್‌ಪಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2022, 17:43 IST
Last Updated 18 ಜನವರಿ 2022, 17:43 IST
ಅಖಿಲೇಶ್ ಯಾದವ್ ಅವರು ಲಖನೌದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಪಕ್ಷದ ಮುಖಂಡ ಅಬ್ದುಲ್ ಅಜಂ ಖಾನ್ ಇದ್ದಾರೆ–ಪಿಟಿಐ ಚಿತ್ರ
ಅಖಿಲೇಶ್ ಯಾದವ್ ಅವರು ಲಖನೌದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಪಕ್ಷದ ಮುಖಂಡ ಅಬ್ದುಲ್ ಅಜಂ ಖಾನ್ ಇದ್ದಾರೆ–ಪಿಟಿಐ ಚಿತ್ರ   

ಲಖನೌ: ‘300 ಯೂನಿಟ್‌ ಉಚಿತ ವಿದ್ಯುತ್‌’ ಪಡೆಯಲು ಆಸಕ್ತಿ ಇರುವವರ ನೋಂದಣಿಗೆ ಸಮಾಜವಾದಿ
ಪಕ್ಷವು (ಎಸ್‌ಪಿ) ಮನೆ ಮನೆ ಅಭಿಯಾನವನ್ನು ಮಂಗಳವಾರ ಆರಂಭಿಸಿದೆ. ಉತ್ತರ ಪ್ರದೇಶದ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಕ್ಕೆ ಇಳಿಸುವ ‘ಸಂಕಲ್ಪ’ ತೊಟ್ಟ ಮರು ದಿನವೇ ಎಸ್‌ಪಿ ಅಧ್ಯಕ್ಷ ಅಖಿಲೇಶ್‌ ಯಾದವ್ ಅವರು ಈ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ಧಾರೆ. ಎಸ್‌ಪಿ ಅಧಿಕಾರಕ್ಕೆ ಬಂದರೆ ‘300 ಯೂನಿಟ್‌ ಉಚಿತ ವಿದ್ಯುತ್‌ ನೀಡಲಾಗುವುದು’ ಎಂಬುದು ಎಸ್‌ಪಿಯ ಭರವಸೆಗಳಲ್ಲಿ ಒಂದಾಗಿದೆ.

ವಿದ್ಯುತ್‌ ಬಳಸುತ್ತಿರುವ ಪ್ರತಿ ಮನೆಗೂ ಎಸ್‌ಪಿ ಕಾರ್ಯಕರ್ತರು ಭೇಟಿ ನೀಡಿ ನೋಂದಣಿ ಮಾಡಿಸಿಕೊಳ್ಳಲಿದ್ದಾರೆ ಎಂದು ಅಖಿಲೇಶ್‌ ಹೇಳಿದ್ದಾರೆ.

‘ಪಾತಕಿ’ಯೊಬ್ಬರಿಗೆ ಪಕ್ಷದ ಟಿಕೆಟ್‌ ನೀಡುವ ಮೂಲಕ, ಸುಪ್ರೀಂ ಕೋರ್ಟ್‌ ಮಾರ್ಗಸೂಚಿಯನ್ನು ಎಸ್‌ಪಿ ಉಲ್ಲಂಘಿಸಿದೆ. ಹಾಗಾಗಿ, ಆ ಪಕ್ಷದ ಮಾನ್ಯತೆ ರದ್ದುಪಡಿಸಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಈ ಅರ್ಜಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಅಪರಾಧಿಗಳಿದ್ದಾರೆ. ಹಾಗಾಗಿ, ಮೊದಲಿಗೆ ಆ ಪಕ್ಷದ ಮಾನ್ಯತೆ ರದ್ದುಪಡಿಸಬೇಕು ಎಂದು ಹೇಳಿದ್ದಾರೆ.

ADVERTISEMENT

‘ಮುಖ್ಯಮಂತ್ರಿಯ ವಿರುದ್ಧ ಅಪರಾಧ ಪ್ರಕರಣ ಇದೆ. ಉಪ ಮುಖ್ಯಮಂತ್ರಿ ವಿರುದ್ಧವೂ ಅಪರಾಧ ಪ್ರಕರಣ ಇದೆ. ಹಾಗಾಗಿ, ಬಿಜೆಪಿಯ ಮಾನ್ಯತೆ ರದ್ದುಪಡಿಸಬೇಕು’ ಎಂದು ಅವರು ಹೇಳಿದ್ಧಾರೆ.

ರಾಂಪುರದ ಅಧಿಕಾರಿಯೊಬ್ಬರಿಗೆ ‘ಸರದಿ ತಪ್ಪಿಸಿ’ ಬಡ್ತಿ ಬೇಕಿತ್ತು. ಹಾಗಾಗಿ, ಆ ಅಧಿಕಾರಿಯು ಎಸ್‌ಪಿ ಮುಖಂಡ ಆಜಂ ಖಾನ್‌ ಮತ್ತು ಅವರ ಮಗ ಅಬ್ದುಲ್ಲಾ ಆಜಂ ವಿರುದ್ಧ ಹತ್ತಾರು ಪ್ರಕರಣ ದಾಖಲಿಸಿದ್ಧಾರೆ ಎಂದು ಹೇಳಿದರು.

ಭೌತಿಕ ರ‍್ಯಾಲಿ ನಿಷೇಧದ ಹಿಂದೆ ಬಿಜೆಪಿ ಇದೆ. ಆ ಪಕ್ಷದ ಚುನಾವಣಾ ಸಿದ್ಧತೆಗಳೆಲ್ಲ ಮುಗಿದಿವೆ. ಹಾಗಾಗಿ ರ‍್ಯಾಲಿಗೆ ನಿಷೇಧ ಇರುವಂತೆ ಬಿಜೆಪಿ ನೋಡಿಕೊಂಡಿದೆ. ಆದರೆ, ಎಸ್‌ಪಿ ಮತ್ತು ಅದರ ಮಿತ್ರ ಪಕ್ಷಗಳು ಡಿಜಿಟಲ್‌ ವೇದಿಕೆಗಳ ಮೂಲಕ ಜನರನ್ನು ತಲುಪುತ್ತಿವೆ ಎಂದು ಅಖಿಲೇಶ್‌ ಹೇಳಿದ್ಧಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.