ADVERTISEMENT

ಭಯೋತ್ಪಾದನೆ ನಿಲ್ಲಿಸದಿದ್ರೆ ಅನುಭವಿಸ್ತೀರಿ: ಪಾಕ್‌ಗೆ ರಾವತ್ ಖಡಕ್ ಎಚ್ಚರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜನವರಿ 2020, 6:27 IST
Last Updated 16 ಜನವರಿ 2020, 6:27 IST
ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್
ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್   

ಭಯೋತ್ಪಾದಕರನ್ನು ಪ್ರೋತ್ಸಾಹಿಸುವ ದೇಶಗಳು ಇರುವವರೆಗೆ ಭಯೋತ್ಪಾದನೆ ಇದ್ದೇ ಇರುತ್ತದೆ. ಅದನ್ನು ಕೊನೆಗಾಣಿಸುವ ಒಂದೇ ಮಾರ್ಗವೆಂದರೆ ವಿಶ್ವ ವಾಣಿಜ್ಯ ಸಂಸ್ಥೆಯ ಮೇಲಿನ ದಾಳಿಯ ನಂತರ (9/11) ಅಮೆರಿಕ ಪ್ರತಿಕ್ರಿಯಿಸಿದಂತೆ ಪ್ರತಿಕ್ರಿಯಿಸುವುದು ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಪರೀಕ್ಷವಾಗಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.

‘ಭಯೋತ್ಪಾದನೆಗೆ ಪ್ರೋತ್ಸಾಹ ನೀಡಿ, ಭಯೋತ್ಪಾದಕರಿಗೆ ಶಸ್ತ್ರಗಳನ್ನು ಮತ್ತು ಹಣಕಾಸು ನೆರವು ಒದಗಿಸುವ ಮೂಲಕ ಅವರನ್ನುಮುಸುಕಿನ ಯುದ್ಧದ ದಾಳಗಳಾಗಿಸಿಕೊಳ್ಳುವ ದೇಶಗಳು ಇರುವವರೆಗೆ ಭಯೋತ್ಪಾದನೆ ಇದ್ದೇ ಇರುತ್ತದೆ. ಅಂಥ ದೇಶಗಳಿಗೆ ಪಾಠ ಕಲಿಸದೇ ಭಯೋತ್ಪಾದನೆಗೆ ತಡೆಯೊಡ್ಡಲು ಆಗುವುದಿಲ್ಲ’ ಎನ್ನುವ ಬಿಪಿನ್ ರಾವತ್ ಅವರ ಹೇಳಿಕೆಯನ್ನುಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

‘ಭಯೋತ್ಪಾದನೆಯನ್ನು ನಾವು ಮಟ್ಟ ಹಾಕಲೇಬೇಕು. ಅಮೆರಿಕದವರು 9/11ರ ನಂತರ ನಡೆದುಕೊಂಡಂತೆ ನಾವೂ ನಡೆದುಕೊಂಡರೆ ಮಾತ್ರ ಇದು ಸಾಧ್ಯವಾಗುತ್ತೆ. ಇದು ಸಾಧ್ಯವಾಗಲು ನೀವು ಭಯೋತ್ಪಾದಕರನ್ನು ಏಕಾಂಗಿಯಾಗಿಸಬೇಕು. ಭಯೋತ್ಪಾದಕರನ್ನು ಪ್ರೋತ್ಸಾಹಿಸುವವರು ಯಾರೇ ಆಗಿದ್ದರೂ ಗುರಿಯಾಗಿಸಬೇಕು’ ಎಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾವತ್ ಹೇಳಿದರು.

ADVERTISEMENT

‘ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ ವಿತ್ತ ಕಾರ್ಯಪಡೆ (Financial Action Task Force–FATF) ಈ ಸಂಬಂಧ ಉತ್ತಮ ನಿರ್ಧಾರ ತೆಗೆದುಕೊಂಡಿದೆ. ರಾಜತಾಂತ್ರಿಕವಾಗಿ ಒಂದು ದೇಶವನ್ನು ಏಕಾಂಗಿಯಾಗಿಸುವುದು ಸಹ ಉತ್ತಮ ಕಾರ್ಯತಂತ್ರವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಜನರಲ್ ರಾವತ್ ಅವರು ತಮ್ಮ ಮಾತಿನಲ್ಲಿ ಎಲ್ಲಿಯೂ ಪಾಕಿಸ್ತಾನವನ್ನು ಉಲ್ಲೇಖಿಸಲಿಲ್ಲ. ಆದರೆ ಅವರ ಸಂದೇಶವು ನೇರವಾಗಿ ಪಾಕಿಸ್ತಾನವನ್ನೇ ಗುರಿಯಾಗಿಸಿಕೊಂಡಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ. ಭಾರತದಲ್ಲಿ ನಡೆಯುತ್ತಿರುವ ಭಯೋತ್ಪಾದಕರ ಕೃತ್ಯಗಳಿಗೆ ಪಾಕಿಸ್ತಾನವೇ ಕಾರಣ ಎಂದು ಭಾರತ ಬಹುಕಾಲದಿಂದ ಆರೋಪಿಸುತ್ತಿದೆ. 26/11 ಎಂದೇ ಜನಜನಿತವಾದ ಮುಂಬೈ ಮೇಲಿನ ಉಗ್ರರ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ಭಾರತ ಆರೋಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.