ADVERTISEMENT

ತಿರುವನಂತಪುರ: ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ- ಆರೋಪಿಗಳ ಬಂಧನ

ವಲಸೆ ಕಾರ್ಮಿಕರಿಂದ ಕೃತ್ಯ– ಆಪ್ತ ಸಮಾಲೋಚನೆ ವೇಳೆ ವಿಷಯ ಬಹಿರಂಗ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2020, 12:01 IST
Last Updated 25 ಆಗಸ್ಟ್ 2020, 12:01 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ತಿರುವನಂತಪುರ: ಉತ್ತರ ಪ್ರದೇಶದ ವಲಸೆ ಕಾರ್ಮಿಕರು ಬಾಲಕಿಯ ಮೇಲೆ ಸತತ ಆರು ತಿಂಗಳು ಸಾಮೂಹಿಕ ಅತ್ಯಾಚಾರ ನಡೆಸಿರುವ ಪ್ರಕರಣ ಕೊಚ್ಚಿಯಲ್ಲಿ ಬೆಳಕಿಗೆ ಬಂದಿದೆ.

ಪ್ರಕರಣ ಸಂಬಂಧ, ಶಾಹಿದ್‌ (24), ಫರ್ಹಾದ್‌ ಖಾನ್‌ (29), ಹನೀಫ್‌ (28) ಎಂಬುವರನ್ನು ಬಂಧಿಸಲಾಗಿದೆ. ಇತರ ಮೂವರು ಆರೋಪಿಗಳು ಉತ್ತರ ಪ್ರದೇಶಕ್ಕೆ ಪರಾರಿಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಅವರ ಶೋಧಕ್ಕಾಗಿ ಕೊಚ್ಚಿ ಪೊಲೀಸರ ತಂಡ ಶೀಘ್ರವೇ ಉತ್ತರ ಪ್ರದೇಶಕ್ಕೆ ತೆರಳಲಿದೆ.

14 ವರ್ಷದ ಬಾಲಕಿ ಕೊಚ್ಚಿ ನಗರದ ಎಲೂರು ಬಳಿಯ ಅಜ್ಜಿ ಮನೆಯಲ್ಲಿ ತಂಗಿದ್ದಳು. ಆರೋಪಿಗಳು ಆಕೆಯ ಮನೆಯ ಹತ್ತಿರವೇ ನೆಲೆಸಿದ್ದರು ಎನ್ನಲಾಗಿದೆ.

ADVERTISEMENT

ಕಳೆದ ಮಾರ್ಚ್‌ ತಿಂಗಳ ಲಾಕ್‌ಡೌನ್‌ ಸಮಯದಲ್ಲಿ ಮೊದಲ ಬಾರಿಗೆ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ.ನಂತರ, ಈ ತಿಂಗಳ ಆರಂಭದವರೆಗೂ ಹಲವು ಸ್ಥಳಗಳಿಗೆ ಕರೆದೊಯ್ದು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಆರೋಪಿಗಳು ಬೆದರಿಕೆ ಹಾಕಿದ್ದರಿಂದ ಬಾಲಕಿ ವಿಷಯವನ್ನು ಯಾರ ಬಳಿಯೂ ಹೇಳಿರಲಿಲ್ಲ.

ಶಾಲಾ ಮಕ್ಕಳಿಗಾಗಿ ಇತ್ತೀಚೆಗೆ ನಡೆದ ಆಪ್ತಸಮಾಲೋಚನೆ ಸಂದರ್ಭದಲ್ಲಿ ಬಾಲಕಿ ಈ ವಿಷಯ ಬಹಿರಂಗಪಡಿಸಿದ್ದಾಳೆ. ಆಕೆ ಖಿನ್ನತೆಗೆ ಒಳಗಾಗಿದ್ದಾಳೆ ಎನ್ನಲಾಗಿದೆ.

ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಈಗಾಗಲೇ ಬಂಧನಕ್ಕೊಳಗಾದ ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಆರೋಪಿಗಳು ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಅವರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.