ADVERTISEMENT

ರಾಜ್ಯಸಭೆ: ಕೋವಿಡ್‌ ಸೌಲಭ್ಯ ಪರಿಶೀಲನೆಗೆ ತಜ್ಞರ ಸಮಿತಿ

ರಾಜ್ಯಸಭೆಯಲ್ಲಿ ಆರೋಗ್ಯ ಖಾತೆ ರಾಜ್ಯ ಸಚಿವ ಅಶ್ವಿನ್ ಚೌಬೆ

ಪಿಟಿಐ
Published 20 ಸೆಪ್ಟೆಂಬರ್ 2020, 11:01 IST
Last Updated 20 ಸೆಪ್ಟೆಂಬರ್ 2020, 11:01 IST
ರಾಜ್ಯಸಭೆ ಕಲಾಪ
ರಾಜ್ಯಸಭೆ ಕಲಾಪ   

ನವದೆಹಲಿ: ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆಕೋವಿಡ್-19 ಸೌಲಭ್ಯಗಳನ್ನು ಪರಿಶೀಲಿಸುವುದಕ್ಕಾಗಿ ಸರ್ಕಾರ ತಜ್ಞರ ಸಮಿತಿಯನ್ನು ರಚಿಸಿದೆ.

ಕೇಂದ್ರ ಆರೋಗ್ಯ ಸಚಿವಾಲಯ ರಚಿಸಿರುವ ಈ ಸಮಿತಿ ದೇಶದಾದ್ಯಂತ ವಿವಿಧ ಆಸ್ಪತ್ರೆಗಳಲ್ಲಿ ಕೋವಿಡ್‌-19 ಸೋಂಕಿತರಿಗೆ ನೀಡುತ್ತಿರುವ ಚಿಕಿತ್ಸೆ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸುವ ಜತೆಗೆ, ನೀಡುತ್ತಿರುವ ಸೌಲಭ್ಯಗಳಲ್ಲಿರುವ ನ್ಯೂನತೆಯನ್ನು ಗುರುತಿಸಿ, ಸರ್ಕಾರ ಮತ್ತು ಕೋವಿಡ್‌ ಆಸ್ಪತ್ರೆಗಳ ಸಿಬ್ಬಂದಿಗೆ ಮಾರ್ಗದರ್ಶನ ನೀಡಲಿದೆ ಎಂದು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ರಾಜ್ಯಸಭೆಗೆ ತಿಳಿಸಿದ್ದಾರೆ.

ತಜ್ಞ ಸಮಿತಿ ರಚಿಸಿರುವ ಕುರಿತು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆಯಲಾಗಿದ್ದು, ಅದರಲ್ಲಿ ಕೊರೊನಾ ವೈರಸ್‌ ಸೋಂಕಿನ ಪರೀಕ್ಷೆ ಮತ್ತು ಚಿಕಿತ್ಸೆಗೆ ವಿಧಿಸಿರುವ ವಿವೇಚನಾಯುಕ್ತ ದರಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ ಎಂದು ಚೌಬೆ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಯೋಗಾಲಯ ವರದಿಗಾಗಿ ಕಾಯದೇ ಶಂಕಿತ ಕೋವಿಡ್‌ ರೋಗಿಗಳ ಮೃತದೇಹವನ್ನು ತಕ್ಷಣ ಸಂಬಂಧಿಗಳಿಗೆ ಹಸ್ತಾಂತರಿಸಬೇಕು. ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಮಾರ್ಗಸೂಚಿ ಪ್ರಕಾರವ ಶವಸಂಸ್ಕಾರ ಮಾಡಬೇಕು ಎಂದು ಆ ಸಲಹೆ ನೀಡಿರುವುದಾಗಿ ಹೇಳಿದ್ದಾರೆ.

ಕೆಲವು ರಾಜ್ಯಗಳಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಶವ ಸಂಸ್ಕಾರವನ್ನು ತುಂಬಾ ಅಸೂಕ್ಷ್ಮವಾಗಿ ಮಾಡಲಾಗುತ್ತಿದೆ ಎಂಬ ಸುಪ್ರೀಂ ಕೋರ್ಟ್‌ನ ಅವಲೋಕನದ ಹಿನ್ನೆಲೆಯಲ್ಲಿ, ಸಚಿವ ಚೌಬೆ ಅವರು ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ರಾಜ್ಯಸಭೆಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.