ಜೈಪುರ: ‘ನನ್ನ ನೇತೃತ್ವದ ಕೇಂದ್ರ ಸರ್ಕಾರವು ಎಂಟು ವರ್ಷದಲ್ಲಿ ಉತ್ತಮ ಆಡಳಿತ, ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದೆ. ಬಿಜೆಪಿ ಮುಂದಿನ 25 ವರ್ಷಕ್ಕೆ ಗುರಿ ನಿಗದಿಪಡಿಸಲು, ಆ ನಿಟ್ಟಿನಲ್ಲಿ ಕೆಲಸ ಮಾಡಲು ಇದು ಸಕಾಲ’ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ.
‘ಪ್ರಸ್ತುತ, ವಿರೋಧಪಕ್ಷಗಳು ದೇಶದ ಗಮನವನ್ನು ಅಭಿವೃದ್ಧಿಯಿಂದ ಬೇರೆಡೆಗೆ ಸೆಳೆಯಲು ಯತ್ನಿಸುತ್ತಿವೆ. ಬಿಜೆಪಿಯ ಮುಖಂಡರು ಇಂತಹ ಹುನ್ನಾರಗಳಿಗೆ ಬಲಿಯಾಗದೇ ರಾಷ್ಟ್ರ ಹಿತದ ಮುಖ್ಯ ವಿಷಯಗಳಿಗೆ ಬದ್ಧರಾಗಬೇಕು’ ಎಂದು ಕಿವಿಮಾತು ಹೇಳಿದ್ದಾರೆ.
ಬಿಜೆಪಿ ಅಭಿವೃದ್ಧಿಯನ್ನು ರಾಷ್ಟ್ರ ರಾಜಕಾರಣದ ಮುನ್ನೆಲೆಗೆ ತಂದಿದೆ. ಆದರೆ, ಕೆಲ ರಾಜಕೀಯ ಪಕ್ಷಗಳು ತಮ್ಮ ಅನುಕೂಲಕ್ಕಾಗಿ ದೇಶದ ಭವಿಷ್ಯದ ಜೊತೆಗೆ ಆಟವಾಡುತ್ತಿವೆ ಎಂದು ಅವರು ಯಾವುದೇ ಪಕ್ಷದ ಹೆಸರು ಉಲ್ಲೇಖಿಸದೇ ಟೀಕಿಸಿದರು.
ಕೇಂದ್ರ ಸರ್ಕಾರವು 8 ವರ್ಷದ ಆಡಳಿತ ಪೂರ್ಣಗೊಳಿಸಿದ ಸಂದರ್ಭದಲ್ಲಿ ಅವರು ಇಲ್ಲಿ ಪಕ್ಷದ ಪದಾಧಿಕಾರಿಗಳನ್ನು ಉದ್ದೇಶಿಸಿ ವರ್ಚುವಲ್ ರೂಪದಲ್ಲಿ ಮಾತನಾಡಿದರು.
‘ಪಕ್ಷದ ಮುಖಂಡರು ರಾಷ್ಟ್ರದ ಹಿತಾಸಕ್ತಿಗೆ ಸಂಬಂಧಿಸಿದ ವಿಷಯ ಹೊರತುಪಡಿಸಿ, ಇತರೆ ಅಂಶಗಳಿಗೆ ಗಮನ ಕೊಡಬಾರದು’ ಎಂದರು. ಜ್ಞಾನವಾಪಿ ಮಸೀದಿಯಲ್ಲಿ ‘ಶಿವಲಿಂಗ’ ಪತ್ತೆಯಾಗಿದೆ ಎಂಬುದು ತೀವ್ರ ಚರ್ಚೆಗೆ ಗ್ರಾಸವಾಗಿರುವ ಹೊತ್ತಿನಲ್ಲಿ ಈ ಹೇಳಿಕೆ ಗಮನಾರ್ಹವಾಗಿದೆ.
ವಿರೋಧಪಕ್ಷಗಳು ಸ್ವಹಿತಾಸಕ್ತಿಗಾಗಿ ಸಮಾಜದ ಸಣ್ಣ ದೌರ್ಬಲ್ಯ, ಉದ್ವಿಗ್ನತೆಗಳನ್ನು ಬಳಸಿಕೊಂಡು ವಿಷ ಕಕ್ಕುತ್ತಿವೆ. ಕೆಲವೊಂದು ಬಾರಿ ಜಾತಿ, ಧರ್ಮದ ಆಧಾರದಲ್ಲಿಯೂ ಅವು ಜನರನ್ನು ಪ್ರಚೋದಿಸುತ್ತಿವೆ ಎಂದು ಆರೋಪಿಸಿದರು.
‘ಏಕ್ ಭಾರತ್, ಶ್ರೇಷ್ಠ ಭಾರತ್’ ಕುರಿತು ಕನಸು ಸಾಕಾರಗೊಳಿಸಲು ಇಂಥ ಯತ್ನದ ವಿರುದ್ಧ ಜಾಗೃತರಾಗಿರುವಂತೆ ಜನರನ್ನು ಎಚ್ಚರಿಸುವುದು ಅಗತ್ಯ. ಜನಸಂಘದ ಕಾಲದಿಂದಲೂ ರಾಷ್ಟ್ರದ ಹಿತಾಸಕ್ತಿ, ದೇಶ ನಿರ್ಮಾಣವೇ ಪಕ್ಷದ ಕಾರ್ಯಕ್ರಮಗಳ ಕೇಂದ್ರವಾಗಿದೆ ಎಂದು ಹೇಳಿದರು.
‘ದೇಶದ ಎಲ್ಲ ಭಾಷೆಗಳು ‘ಭಾರತೀಯ’
ಜೈಪುರ (ಪಿಟಿಐ): ‘ಭಾರತದ ಎಲ್ಲ ಭಾಷೆಗಳು ‘ಭಾರತೀಯ’ ಎಂದು ಬಿಜೆಪಿ ಪರಿಗಣಿಸಲಿದೆ ಮತ್ತು ಗೌರವಿಸಲು ಅರ್ಹವಾದುದು ಎಂದು ಭಾವಿಸಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾಷೆಯ ವಿಷಯದಲ್ಲಿ ಪ್ರಚೋದನೆ ಉಂಟು ಮಾಡುವ ಯತ್ನಗಳ ವಿರುದ್ಧ ಜನರನ್ನು ಜಾಗೃತಗೊಳಿಸಬೇಕು ಎಂದು ಪಕ್ಷದ ಮುಖಂಡರಿಗೆ ಕರೆ ನೀಡಿದರು. ‘ಪ್ರತಿ ಭಾಷೆಯಲ್ಲಿಯೂ ಭಾರತೀಯ ಸಂಸ್ಕೃತಿ ಪ್ರತಿಬಿಂಬಿಸುವುದನ್ನು ಬಿಜೆಪಿ ಕಾಣುತ್ತಿದೆ’ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿಯೂ ಸ್ಥಳೀಯ ಭಾಷೆಗಳಿಗೆ ಪ್ರಾಧ್ಯಾನ್ಯತೆ ನೀಡಲಾಗಿದೆ. ಇದು, ಎಲ್ಲ ಭಾಷೆಗಳ ಕುರಿತು ನಮಗಿರುವ ಬದ್ಧತೆಯಾಗಿದೆ. ರಾಷ್ಟ್ರೀಯ ಹೆಮ್ಮೆಯಾಗಿ ದೇಶದ ಸಂಸ್ಕೃತಿ, ಭಾಷಾ ವೈವಿಧ್ಯವನ್ನು ಬಿಂಬಿಸಿದ್ದೇ ಬಿಜೆಪಿ ಎಂದು ಪ್ರತಿಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.