ನವದೆಹಲಿ: ಸಿಬಿಐನ ಹಂಗಾಮಿ ನಿರ್ದೇಶಕರಾಗಿದ್ದ ಎಂ.ನಾಗೇಶ್ವರರಾವ್ ಹಾಗೂ ಕಾನೂನು ಸಲಹೆಗಾರ ಎಸ್.ಭಾನುರಾಮ್ ಅವರಿಂದ ನ್ಯಾಯಾಂಗ ನಿಂದನೆಯಾಗಿದೆ ಎಂದು ಅಭಿಪ್ರಾಯಪಟ್ಟ ಸುಪ್ರೀಂಕೋರ್ಟ್ ಈ ಇಬ್ಬರು ಅಧಿಕಾರಿಗಳಿಗೆ ಮಂಗಳವಾರ ತಲಾ ₹ 1 ಲಕ್ಷ ದಂಡ ಹಾಗೂ ಕಲಾಪ ಮುಗಿಯುವವರೆಗೆ ಕೋರ್ಟ್ನ ಕೋಣೆಯಲ್ಲಿ ಕುಳಿತುಕೊಳ್ಳುವ ಶಿಕ್ಷೆ ವಿಧಿಸಿತು.
ಸಿಬಿಐನ ಜಂಟಿ ನಿರ್ದೇಶಕ ಎ.ಕೆ.ಶರ್ಮಾ ಅವರನ್ನು ತನ್ನ ಆದೇಶಕ್ಕೆ ವಿರುದ್ಧವಾಗಿ ಸಿಆರ್ಪಿಎಫ್ನ ಹೆಚ್ಚುವರಿ ಮಹಾ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಿದ್ದರಿಂದ ಈ ಇಬ್ಬರು ಅಧಿಕಾರಿಗಳಿಗೆ ಸುಪ್ರೀಂಕೋರ್ಟ್ ಶಿಕ್ಷೆ ವಿಧಿಸಿದೆ. ಶರ್ಮಾ ಅವರು ಬಿಹಾರದ ಬಾಲಮಂದಿರದಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖಾಧಿಕಾರಿಯಾಗಿದ್ದರು.
ಮುಖ್ಯನ್ಯಾಯಮೂರ್ತಿ ರಂಜನ್ ಗೋಗೊಯಿ, ನ್ಯಾಯಮೂರ್ತಿಗಳಾದ ಎಲ್.ಎನ್.ರಾವ್ ಹಾಗೂ ಸಂಜೀವ್ ಖನ್ನಾ ಅವರನ್ನು ಒಳಗೊಂಡ ಪೀಠ, ‘ಉಭಯ ಅಧಿಕಾರಿಗಳು ಬೇಷರತ್ತಾಗಿ ಕ್ಷಮೆ ಯಾಚಿಸಿದ್ದರೂ ಅದನ್ನು ಪರಿಗಣಿಸುವ ಪ್ರಶ್ನೆಯೇ ಇಲ್ಲ. ನನಗೆ ಏನು ಮಾಡಬೇಕು ಎನಿಸಿತ್ತೋ ಅದನ್ನು ಮಾಡಿದ್ದೇನೆ ಎಂಬ ಧೋರಣೆ ರಾವ್ ಅವರದ್ದಾಗಿದೆ. ಇದು ನ್ಯಾಯಾಂಗ ನಿಂದನೆ ಅಲ್ಲದೇ ಮತ್ತೇನು’ ಎಂದು ಪ್ರಶ್ನಿಸಿತು.
‘ಅಧಿಕಾರಿಗಳಿಗೆ ವಿಧಿಸಲಾಗಿರುವ ಶಿಕ್ಷೆಯನ್ನು ಕಡಿಮೆ ಮಾಡಬೇಕು. ಇಬ್ಬರು ಅಧಿಕಾರಿಗಳ ಬಗ್ಗೆ ಸಹಾನುಭೂತಿ ತೋರಿ’ ಎಂಬ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರ ಮನವಿಯನ್ನು ಸಹ ಪೀಠ ತಿರಸ್ಕರಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.