ಅಹಮದಾಬಾದ್: ಗುಜರಾತ್ ಸಚಿವ ಗಣಪತಿ ಸಿಂಹ ವಾಸವ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ನಾಯಿಮರಿ ಎಂದು ಕರೆದಿದ್ದಾರೆ. ವಿರೋಧ ಪಕ್ಷಗಳು ಮಾತ್ರವಲ್ಲ, ಆಡಳಿತಾರೂಢ ಬಿಜೆಪಿ ಸಹ ಈ ಹೇಳಿಕೆಯನ್ನು ಖಂಡಿಸಿದೆ.
ಗುಜರಾತ್ನ ಭಾರೂಚ್ ಲೋಕಸಭಾ ಕ್ಷೇತ್ರದಲ್ಲಿ ಶನಿವಾರ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ವಾಸವ ಅವರು ಈ ಮಾತು ಹೇಳಿದ್ದಾರೆ. ‘ರಾಹುಲ್ ಗಾಂಧಿ ಕುರ್ಚಿಯಿಂದ ಎದ್ದರೆ, ನಾಯಿಮರಿ ಬಾಲ ಅಲ್ಲಾಡಿಸುತ್ತಾ ಎದ್ದಂತೆ ಕಾಣುತ್ತದೆ. ಬ್ರೆಡ್ ಎಸೆದರೆ ಸಾಕು ಆ ನಾಯಿಮರಿ ಚೀನಾಕ್ಕೂ ಹೋಗುತ್ತದೆ, ಪಾಕಿಸ್ತಾನಕ್ಕೂ ಹೋಗುತ್ತದೆ’ ಎಂದು ಅವರು ಹೇಳಿದ್ದಾರೆ.
‘ಇಂತಹ ಭಾಷೆ ಬಳಸುವುದರಿಂದ ಮತಗಳು ದೊರೆಯುವುದಿಲ್ಲ ಎಂಬುದು ಅವರಿಗೆ ಅರ್ಥವಾಗಬೇಕಿದೆ. ಬದಲಿಗೆ ಅವರು ಭಾರೂಚ್ನ ಬುಡಕಟ್ಟು ಜನರಿಗೆ ಏನು ಮಾಡಿದ್ದಾರೆ ಎಂಬುದರ ಲೆಕ್ಕ ನೀಡಲಿ’ ಎಂದು ಗುಜರಾತ್ ಕಾಂಗ್ರೆಸ್ ಘಟಕ ಸವಾಲು ಹಾಕಿದೆ.
‘ಚುನಾವಣೆ ಸಂದರ್ಭದಲ್ಲಿ ಮಾತಿನ ಮೇಲೆ ಹಿಡಿತವಿರಬೇಕು. ಯಾರೂ ಇಂತಹ ಪದಗಳನ್ನು ಬಳಸಬಾರದು’ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.