ಅಹಮದಾಬಾದ್: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 182 ಮೀಟರ್ ಎತ್ತರದ ‘ಏಕತಾ ಪ್ರತಿಮೆ’, ಬ್ರಿಟನ್ ಮೂಲದ ಇನ್ಸ್ಟಿಟ್ಯೂಷನ್ ಆಫ್ ಸ್ಟ್ರಕ್ಚರಲ್ ಎಂಜಿನಿಯರ್ಸ್ ಸಂಸ್ಥೆಯ ಪ್ರಶಸ್ತಿ ಪಟ್ಟಿಯ ಅಂತಿಮ ಸುತ್ತಿಗೆ ಆಯ್ಕೆಯಾಗಿದೆ.
ಸಂಸ್ಥೆ 2019ನೇ ಸಾಲಿಗೆ ನೀಡುವ ‘ದಿ ಸ್ಟ್ರಕ್ಚರಲ್ ಅವಾರ್ಡ್ಸ್’ಗೆ ಆಯ್ಕೆಯಾಗಿರುವ 49 ರಚನೆಗಳ ಪೈಕಿ ‘ಏಕತಾ ಪ್ರತಿಮೆ’ ಸಹ ಸೇರಿದೆ. ನವೆಂಬರ್ 15ಕ್ಕೆ ಲಂಡನ್ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಘೋಷಣೆಯಾಗಲಿದೆ.
‘ಏಕತಾ ಪ್ರತಿಮೆಯ ಗಾತ್ರ ಹಾಗೂ ಅದು ಇರುವ ಸ್ಥಳ ಪ್ರಭಾವಶಾಲಿಯಾಗಿದೆ’ ಎಂದು ಆಯ್ಕೆ ಸಮಿತಿ ಅಭಿಪ್ರಾಯಪಟ್ಟಿದೆ.
ಹಿರಿಯ ಶಿಲ್ಪಿ ರಾಮ ವನಜಿ ಸುತಾರ್ ಅವರು ಈ ಪ್ರತಿಮೆ ವಿನ್ಯಾಸಗೊಳಿಸಿದ್ದು, ಲಾರ್ಸನ್ ಆ್ಯಂಡ್ ಟುಬ್ರೊ (ಎಲ್ ಆ್ಯಂಡ್ ಟಿ) ನಿರ್ಮಿಸಿದೆ.
ಇನ್ಸ್ಟಿಟ್ಯೂಷನ್ ಆಫ್ ಸ್ಟ್ರಕ್ಚರಲ್ ಎಂಜಿನಿಯರ್ಸ್ ಸಂಸ್ಥೆಯು ವಿಶ್ವದ ಅತ್ಯುತ್ತಮ ರಚನೆಗಳಿಗೆ ಕಳೆದ 52 ವರ್ಷಗಳಿಂದ ಈ ಸಂಸ್ಥೆ ಪ್ರಶಸ್ತಿ ನೀಡುತ್ತಿದೆ.
‘ಸ್ಟ್ರಕ್ಚರಲ್ ಎಂಜಿನಿಯರ್ಗಳು ನಿರ್ವಹಿಸುವ ಪ್ರಮುಖ ಕಾರ್ಯಗಳ ಕುರಿತು ಜಾಗೃತಿ ಹೆಚ್ಚಿಸುವುದು ಈ ಪ್ರಶಸ್ತಿ ನೀಡುವ ಉದ್ದೇಶಗಳಲ್ಲಿ ಒಂದಾಗಿದೆ’ ಎಂದು ಸಂಸ್ಥೆಯ ಸಿಇಒ ಮಾರ್ಟಿನ್ ಪೊವೆಲ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.