ADVERTISEMENT

ಐಐಟಿ: ಅಧಿಕಾರಿಗಳಿಂದಲೇ ಕಿರುಕುಳ

ಸಂಶೋಧನಾ ವಿದ್ಯಾರ್ಥಿಗಳ ಆರೋಪ

ಪಿಟಿಐ
Published 3 ಡಿಸೆಂಬರ್ 2018, 17:40 IST
Last Updated 3 ಡಿಸೆಂಬರ್ 2018, 17:40 IST

ಚೆನ್ನೈ: ಹಾಸ್ಟೆಲ್ ಕೊಠಡಿ ತಪಾಸಣೆ ವೇಳೆ ಜಾಗೃತ ದಳದ ಅಧಿಕಾರಿಗಳು ಕಿರುಕುಳ ನೀಡಿದ್ದು, ಖಾಸಗಿತನಕ್ಕೆ ಧಕ್ಕೆ ತಂದಿದ್ದಾರೆ ಎಂದು ಮದ್ರಾಸ್‌ ಐಐಟಿಯ ಕೆಲವು ಸಂಶೋಧನಾ ವಿದ್ಯಾರ್ಥಿಗಳು ದೂರಿದ್ದಾರೆ. ಆದರೆ, ಈ ಆರೋಪವನ್ನು ಡೀನ್‌ ನಿರಾಕರಿಸಿದ್ದಾರೆ.

ತಮ್ಮ ಕೊಠಡಿಗಳಿಗೆ ಬಂದು ಅಪಮಾನ ಮಾಡಿದ್ದು, ನಮ್ಮ ಒಪ್ಪಿಗೆ ಇಲ್ಲದೇ ಚಿತ್ರ ತೆಗೆದಿದ್ದಾರೆ. ಅವರ ವರ್ತನೆ ಖಾಸಗಿತನ ಹಾಗೂ ಗೌರವಕ್ಕೆ ಧಕ್ಕೆ ತರುವಂತಿದೆ ಎಂದು ಹಾಸ್ಟೆಲ್‌ನಲ್ಲಿರುವ ಸಂಶೋಧನಾ ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ.

ಈ ಕುರಿತು ಮಾತನಾಡಿದ ವಿದ್ಯಾರ್ಥಿ ವಿಭಾಗದ ಡೀನ್ ಶಿವಕುಮಾರ್, ಜಾಗೃತ ದಳದ ಅಧಿಕಾರಿಗಳ ವಿರುದ್ಧ ದೂರು ಬಂದಿದೆ. ಅವರು ಅಲ್ಲಿನ ಸಮಸ್ಯೆಗಳ ಕುರಿತು ಮಾತನಾಡಿದ್ದಾರೆ ಅಷ್ಟೆ, ಚಿತ್ರಗಳನ್ನು ತೆಗೆದಿಲ್ಲ ಎಂದರು.

ADVERTISEMENT

ಹಾಸ್ಟೆಲ್ ನಿಯಮಗಳನ್ನು ಅನುಷ್ಠಾನಗೊಳಿಸಲು ಜಾಗೃತ ದಳದ ಅಧಿಕಾರಿಗಳು ಕೆಲಸ ಮಾಡುತ್ತಾರೆ. ಪರಿಶೀಲನೆ ಮಾಡುವುದನ್ನು ಕಿರುಕುಳ ಎಂದರೆ ಹೇಗೆ? ಎಂದು ಅವರು ಪ್ರಶ್ನಿಸಿದ್ದಾರೆ.

ಹೆಸರು ಹೇಳಲು ಬಯಸದ ಸಂಶೋಧನಾ ವಿದ್ಯಾರ್ಥಿಯೊಬ್ಬರು, ಅಧಿಕಾರಿಗಳು ಒತ್ತಾಯಪೂರ್ವಕವಾಗಿ ಕೊಠಡಿಯಿಂದ ಹೊರಗಡೆ ಕಳಿಸಿದರು, ಎಲ್ಲ ವಸ್ತುಗಳನ್ನು ಹೊರಗೆ ಚೆಲ್ಲಿ ಪರಿಶೀಲಿಸಿದರು ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.