ಚಂಡೀಗಢ: ದಂಪತಿ ಮತ್ತು ಅವರ ನಾಲ್ಕು ವರ್ಷದ ಮಗ ಸೇರಿದಂತೆ ಆರು ಮಂದಿಯನ್ನು ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕುಸ್ತಿ ತರಬೇತುದಾರ ಅಪರಾಧವೆಸಗಿರುವುದು ದೃಢಪಟ್ಟಿದೆ ಎಂದು ಹರಿಯಾಣದ ರೋಹ್ಟಕ್ ಜಿಲ್ಲೆಯ ನ್ಯಾಯಾಲಯ ತೀರ್ಪು ನೀಡಿದೆ.
ಆರೋಪಿ ಸುಖ್ವಿಂದರ್, ಕೊಲೆ ಮತ್ತು ಕೊಲೆ ಯತ್ನ ಮಾಡಿರುವುದಾಗಿ ಭಾರತೀಯ ದಂಡ ಸಂಹಿತೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಹಲವು ಕಲಂಗಳ ಪ್ರಕಾರ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಗಗನ್ ಗೀತ್ ಕೌರ್ ಸೋಮವಾರ ತೀರ್ಪು ನೀಡಿದ್ದಾರೆ.
ನ್ಯಾಯಾಲಯವು ಬುಧವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.
ಸೋನೀಪತ್ ಜಿಲ್ಲೆಯ ಬರೌಡ ಗ್ರಾಮದ ಸುಖ್ವಿಂದರ್, 2021ರ ಫೆಬ್ರುವರಿ 12ರಂದು ಮನೋಜ್ ಮಲಿಕ್, ಅವರ ಪತ್ನಿ ಸಾಕ್ಷಿ ಮಲಿಕ್, ಅವರ ಮಗ ಸರ್ತಾಜ್, ಕುಸ್ತಿ ತರಬೇತುದಾರ ಸತೀಶ್ ಕುಮಾರ್, ಪ್ರದೀಪ್ ಮಲಿಕ್ ಮತ್ತು ಕುಸ್ತಿ ಪಟು ಪೂಜಾ ಅವರನ್ನು ಕೊಲೆ ಮಾಡಿದ್ದರು. ರೋಹ್ಟಕ್ನ ಕುಸ್ತಿ ಅಖಾಡಕ್ಕೆ ಹೊಂದಿಕೊಂಡ ಸ್ಥಳದಲ್ಲಿ ಕೊಲೆ ನಡೆದಿತ್ತು. ಸುಖ್ವಿಂದರ್ ವಿರುದ್ಧ ದೂರುಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಆತನನ್ನು ಕುಸ್ತಿ ತರಬೇತುದಾರನ ಹುದ್ದೆಯಿಂದ ತೆಗೆದುಹಾಕಲಾಗಿತ್ತು. ಅದೇ ಸಿಟ್ಟಿನಲ್ಲಿ ಆತ ಆರು ಮಂದಿಯನ್ನು ಕೊಲೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.