ನವದೆಹಲಿ: ಬಿಜೆಪಿ ನಾಯಕಿ ಶಾಜಿಯಾ ಇಲ್ಮಿ ಅವರು ವಿಡಿಯೊ ಪತ್ರಕರ್ತರೊಬ್ಬರನ್ನು ನಿಂದಿಸುತ್ತಿರುವ ಅರ್ಥ ನೀಡುವ ವಿಡಿಯೊ ಒಂದನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆಯಬೇಕು ಎಂದು ಹಿರಿಯ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಅವರಿಗೆ ದೆಹಲಿ ಹೈಕೋರ್ಟ್ ಮಂಗಳವಾರ ಸೂಚಿಸಿದೆ.
ಶಾಜಿಯಾ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮನಪ್ರೀತ್ ಪಿ.ಎಸ್. ಅರೋರಾ ಅವರು, ಈ ಮಧ್ಯಂತರ ಆದೇಶ ನೀಡಿದರು. ಟಿ.ವಿ. ಚರ್ಚೆಯ ಕಾರ್ಯಕ್ರಮ ಮುಗಿದ ನಂತರವೂ, ಚರ್ಚೆಯಲ್ಲಿ ಭಾಗವಹಿಸುವುದಕ್ಕೆ ನೀಡಿದ್ದ ಸಮ್ಮತಿಯನ್ನು ತಾವು ಹಿಂಪಡೆದ ನಂತರವೂ ತಮ್ಮ ಮಾತುಗಳನ್ನು ಚಿತ್ರೀಕರಿಸಿಕೊಳ್ಳುವ ಮೂಲಕ ಕ್ಯಾಮೆರಾಮನ್ ತಮ್ಮ ಮಾನಹಾನಿಗೆ ಕಾರಣರಾಗಿದ್ದಾರೆ, ಖಾಸಗಿತನಕ್ಕೆ ಧಕ್ಕೆ ತಂದಿದ್ದಾರೆ ಎಂದು ಶಾಜಿಯಾ ಅವರು ದೂರಿದ್ದಾರೆ.
ನ್ಯಾಯಾಲಯವು ವಿಚಾರಣೆಯನ್ನು ಆಗಸ್ಟ್ 16ಕ್ಕೆ ಮುಂದೂಡಿದೆ. ವಿಡಿಯೊವನ್ನು ಬಳಸಿಕೊಳ್ಳುವುದಕ್ಕೆ ಸರ್ದೇಸಾಯಿ ಅವರಿಗೆ ಮಾಧ್ಯಮ ಸಂಸ್ಥೆಯಿಂದ ಅನುಮತಿ ಇತ್ತೇ ಎಂಬ ಬಗ್ಗೆ ಕೋರ್ಟ್ ಅವರ ವಕೀಲರಿಂದ ಮಾಹಿತಿ ಕೇಳಿದೆ.
ಶಾಜಿಯಾ ಅವರು ಸರ್ದೇಸಾಯಿ ನಡೆಸಿಕೊಟ್ಟ ಚರ್ಚೆಯಲ್ಲಿ ಕಳೆದ ತಿಂಗಳು ಭಾಗವಹಿಸಿದ್ದರು. ಸರ್ದೇಸಾಯಿ ಮತ್ತು ಶಾಜಿಯಾ ಅವರ ನಡುವೆ ಬಿರುಸಿನ ವಾಗ್ವಾದ ನಡೆದ ನಂತರ ಶಾಜಿಯಾ ಅವರು ಮಧ್ಯದಲ್ಲೇ ಕಾರ್ಯಕ್ರಮದಿಂದ ಹೊರನಡೆದಿದ್ದರು.
ನಂತರ ಸರ್ದೇಸಾಯಿ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡ ವಿಡಿಯೊ ಒಂದು ಆಕ್ಷೇಪಾರ್ಹವಾಗಿದೆ, ತಮ್ಮ ಖಾಸಗಿತನಕ್ಕೆ ಧಕ್ಕೆ ತಂದಿದೆ ಎಂದು ಶಾಜಿಯಾ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.