ನವದೆಹಲಿ: ಔಷಧಿ, ವೈದ್ಯಕೀಯ ಆಮ್ಲಜನಕ ಖರೀದಿಸಿ ಕೊರೊನಾ ಪೀಡಿತರಿಗೆ ವಿತರಿಸಲು ರಾಜಕಾರಣಿಗಳಿಗೆ ಯಾವುದೇ ಅಧಿಕಾರವಿಲ್ಲ ಎಂದು ಅಭಿಪ್ರಾಯಪಟ್ಟಿರುವ ದೆಹಲಿ ಹೈಕೋರ್ಟ್, ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಶ್ರೀನಿವಾಸ್ ಮತ್ತಿತರರಿಗೆ ಕ್ಲೀನ್ ಚಿಟ್ ನೀಡಿ ದೆಹಲಿ ಪೊಲೀಸರು ವರದಿ ಸಲ್ಲಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ.
‘ರಾಜಕೀಯ ಪಕ್ಷಗಳು ಸಾಂಕ್ರಾಮಿಕದಿಂದ ತಲೆದೋರಿರುವ ದುಃಸ್ಥಿತಿಯ ಲಾಭ ಪಡೆಯುವಂತಾಗಬಾರದು. ರಾಜಕಾರಣಿಗಳು ವೈದ್ಯರ ಚೀಟಿ ಇಲ್ಲದೆ ಈ ಔಷಧಿ ಖರೀದಿಸಿದ್ದಾದರೂ ಹೇಗೆ’ ಎಂದು ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ಜಸ್ಮೀತ್ ಸಿಂಗ್ ಅವರಿದ್ದ ಪೀಠವು ಸೋಮವಾರ ನಡೆದ ವಿಚಾರಣೆ ವೇಳೆ ದೆಹಲಿ ಪೊಲೀಸರನ್ನು ಪ್ರಶ್ನಿಸಿದೆ.
ರಾಷ್ಟ್ರ ರಾಜಧಾನಿಯಲ್ಲಿ ರೆಮ್ಡಿಸಿವಿರ್ ಇಂಜಕ್ಷನ್ ಸೇರಿದಂತೆ ಕೋವಿಡ್–19 ರೋಗಿಗಳಿಗೆ ನೀಡಲಾಗುವ ಔಷಧಿಗಳ ಅಭಾವ ಉಂಟಾಗಿದೆ. ಆದರೂ ಅವುಗಳನ್ನು ಸಂಗ್ರಹಿಸಿ ವಿತರಿಸಿರುವ ರಾಜಕಾರಣಿಗಳ ಬಗ್ಗೆ ಪೊಲೀಸರು ಸಹಾನುಭೂತಿ ವ್ಯಕ್ತಪಡಿಸಿರುವುದು ಸರಿಯಲ್ಲ ಎಂದು ಪೀಠ ಆಕ್ರೋಶ ವ್ಯಕ್ತಪಡಿಸಿದೆ.
‘ರಾಜಕಾರಣಿಗಳು ಇಂಥ ಪರಿಸ್ಥಿತಿಯ ಲಾಭ ಪಡೆದು ಜನಪ್ರಿಯತೆ ಗಳಿಸುವುದನ್ನು ನಾವು ಒಪ್ಪುವುದಿಲ್ಲ. ಅವರಿಗೆ ಔಷಧಿ ಖರೀದಿಸಲು ಅವಕಾಶ ನೀಡಬಾರದು. ಜವಾಬ್ದಾರಿಯನ್ನೇ ಅರಿಯದ ನೀವು ಸತ್ಯವನ್ನು ಹೊರಹಾಕಲು ಆಸಕ್ತಿ ತೋರುತ್ತಿಲ್ಲ’ ಎಂದು ನ್ಯಾಯಪೀಠ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ.
‘ಇಂಥ ಸೇವೆಯು ಜನಪ್ರಿಯತೆ ಗಳಿಸುವುದಕ್ಕಲ್ಲ. ಬದಲಿಗೆ, ಮಾನವೀಯ ನೆಲೆಗಟ್ಟಿನಲ್ಲಿ ಸಾರ್ವಜನಿಕರಿಗೆ ಒಳ್ಳೆಯದನ್ನು ಮಾಡುವುದಕ್ಕಾಗಿ’ ಎಂಬುದೇ ರಾಜಕಾರಣಿಗಳ ಉದ್ದೇಶವಾಗಿದ್ದಲ್ಲಿ, ತಮ್ಮ ಬಳಿ ಇರುವ ಔಷಧಿಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿ, ಸರ್ಕಾರಿ ಆಸ್ಪತ್ರೆಗಳ ಮೂಲಕ ಜನತೆಗೆ ವಿತರಿಸುವಂತೆ ಕೋರಲಿ ಎಂದು ನ್ಯಾಯಮೂರ್ತಿಗಳು ಹೇಳಿದರು.
ಪೊಲೀಸರು ಈ ಕುರಿತು ಮತ್ತೊಮ್ಮೆ ಸೂಕ್ತ ವಿಚಾರಣೆ ನಡೆಸಿ ಒಂದು ವಾರದೊಳಗೆ ವರದಿ ಸಲ್ಲಿಸಲಿ ಎಂದು ಪೀಠ ಸೂಚಿಸಿತು.
‘ಸಮಗ್ರ ವಿಚಾರಣೆ ನಡೆಸಿ ವರದಿ ಸಲ್ಲಿಸಲು 6 ವಾರಗಳ ಸಮಯಾವಕಾಶ ಬೇಕು’ ಎಂಬ ಪೊಲೀಸರ ಮನವಿ ತಿರಸ್ಕರಿಸಿದ ಪೀಠ, ಅಷ್ಟರೊಳಗೆ ಈ ಸಮಸ್ಯೆ ಅಸ್ತಿತ್ವವನ್ನೇ ಕಳೆದುಕೊಳ್ಳಬಹುದು ಎಂದು ಹೇಳಿತು.
ರಾಜಕಾರಣಿಗಳು ಸಂಗ್ರಹಿಸಿರುವ ಔಷಧಿಯನ್ನು ವಶಕ್ಕೆ ಪಡೆದು ಆರೋಗ್ಯ ಸೇವೆಗಳ ನಿರ್ದೇಶನಾಲಯಕ್ಕೆ ಒಪ್ಪಿಸಬೇಕು ಎಂದೂ ಪೊಲೀಸರಿಗೆ ಸೂಚಿಸಿದ ನ್ಯಾಯಪೀಠ, ಮುಂದಿನ ವಿಚಾರಣೆಯನ್ನು ಮೇ 24ಕ್ಕೆ ನಿಗದಿಪಡಿಸಿತು.
‘ಯುವ ಕಾಂಗ್ರೆಸ್ನ ರಾಷ್ಟ್ರೀಯ ಘಟಕದ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಮತ್ತಿತರ ರಾಜಕಾರಣಿಗಳು ಕೊರೊನಾ ಪೀಡಿತರಿಗೆ ನೆರವು ನೀಡುವ ನೆಪದಲ್ಲಿ ಜನಸಾಮಾನ್ಯರಿಗೆ ಔಷಧಿ ದೊರೆಯದ ಸ್ಥಿತಿ ನಿರ್ಮಾಣ ಮಾಡಿದ್ದಾರೆ’ ಎಂದು ಆರೋಪಿಸಿ ಡಾ.ದೀಪಕ್ ಸಿಂಗ್ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಪೀಠ, ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿತ್ತು.
ಆಮ್ ಆದ್ಮಿ ಪಕ್ಷ (ಎಎಪಿ)ದ ಶಾಸಕ ದಿಲೀಪ್ ಪಾಂಡೆ, ಬಿಜೆಪಿಯ ದೆಹಲಿ ಘಟಕದ ವಕ್ತಾರ ಹರೀಶ್ ಖುರಾನಾ, ಬಿಜೆಪಿ ಸಂಸದ ಗೌತಮ್ ಗಂಭೀರ್, ಬಹುಜನ ಸಮಾಜ ಪಕ್ಷ (ಬಿಎಸ್ಪಿ)ದ ಮಾಜಿ ಸಂಸದ ಶಾಹಿದ್ ಸಿದ್ದಿಕ್, ಕಾಂಗ್ರೆಸ್ ಮುಖಂಡ ಅನಿಲ್ಕುಮಾರ್ ಚೌಧರಿ ಮತ್ತಿತರರನ್ನು ವಿಚಾರಣೆಗೆ ಒಳಪಡಿಸಿದ್ದ ಪೊಲೀಸರು, ‘ರಾಜಕಾರಣಿಗಳು ಯಾವುದೇ ರೀತಿಯ ಲಾಭದ ಉದ್ದೇಶದಿಂದ ಔಷಧಿ ವಿತರಿಸಿಲ್ಲ’ ಎಂಬ ವರದಿ ಸಲ್ಲಿಸಿದ್ದರು.
ಕಾಂಗ್ರೆಸ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ದೆಹಲಿಯ ಮಾಜಿ ಶಾಸಕ ಮುಖೇಶ್ ಶರ್ಮಾ ವಿರುದ್ಧವೂ ಸಿಂಗ್ ಆರೋಪ ಹೊರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.