ನಾಗಪುರ: ಮಹಾರಾಷ್ಟ್ರದ ಭಂಡಾರ ನಗರದಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯನ್ನು ನಂದಿಸಲು ಬಂದಿದ್ದ ಅಗ್ನಿ ಶಾಮಕ ಸಿಬ್ಬಂದಿಯ ಕ್ಷಿಪ್ರ ಕಾರ್ಯಾಚರಣೆ, ಶ್ರಮದ ಫಲವಾಗಿ ಏಳು ಶಿಶುಗಳಿಗೆ ಜೀವದಾನ ಸಿಕ್ಕಿತು. ದುರಾದೃಷ್ಟವೆಂದರೆ, 10 ಶಿಶುಗಳನ್ನು ಬದುಕಿಸಲು ಆಗಲಿಲ್ಲ!
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ ಗೃಹ ಸಚಿವ ಅನಿಲ್ ದೇಶಮುಖ್, ‘ಅಗ್ನಿಶಾಮಕ ದಳದ ಸಿಬ್ಬಂದಿಗೆ ಆಸ್ಪತ್ರೆಯ ಸೆಕ್ಯುರಿಟಿ ಗಾರ್ಡ್ಗಳು ನೆರವು ನೀಡಿದರು. ಇವರ ನಡೆಸಿದ ಕ್ಷಿಪ್ರ ಕಾರ್ಯಾಚರಣೆ ಏಳು ಶಿಶುಗಳ ಜೀವ ಉಳಿಸಿತು. ಆದರೆ, 10 ಮಕ್ಕಳ ಜೀವಕ್ಕೆರವಾದ ಈ ದುರಂತಕ್ಕೆ ಕಾರಣರಾದವರನ್ನು ಶಿಕ್ಷಿಸಲಾಗುವುದು’ ಎಂದರು.
‘ಘಟನೆ ಕುರಿತು ಉನ್ನತ ಮಟ್ಟದ ತನಿಖೆಗೂ ಆದೇಶಿಸಲಾಗಿದೆ. ಬೆಂಕಿ ಕಾಣಿಸಿಕೊಳ್ಳಲು ಶಾರ್ಟ್ ಸರ್ಕಿಟ್ ಅಥವಾ ಏರ್ ಕಂಡಿಷನ್ ಯಂತ್ರದಲ್ಲಿನ ದೋಷ ಕಾರಣವೇ ಎಂಬುದನ್ನು ನ್ಯಾಷನಲ್ ಫೈರ್ ಸರ್ವೀಸ್ ಕಾಲೇಜ್ (ಎನ್ಎಫ್ಎಸ್ಸಿ) ಹಾಗೂ ನಾಗಪುರದ ವಿಶ್ವೇಶ್ವರಾಯ ನ್ಯಾಷನಲ್ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿ (ವಿಎನ್ಐಟಿ) ತಜ್ಞರು ತನಿಖೆ ನಡೆಸುವರು’ ಎಂದು ದೇಶಮುಖ್ ಹೇಳಿದರು.
ಇದೇ ವೇಳೆ, ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಬಿಜೆಪಿ ಮುಖಂಡ ದೇವೇಂದ್ರ ಫಡಣವೀಸ್, ‘ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ’ ಎಂದು ಆರೋಪಿಸಿದರು.
‘ಮೃತ ಶಿಶುಗಳ ಕುಟುಂಬಗಳಿಗೆ ತಲಾ ₹ 10 ಲಕ್ಷ ಪರಿಹಾರ ನೀಡಬೇಕು’ ಎಂದೂ ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.