ಚಂಡೀಗಡ: ಅಮೃತ್ಪಾಲ್ ಅವರನ್ನು ಬಂಧಿಸಲು ಪಂಜಾಬ್ ಪೊಲೀಸರು ಇದೇ 18ರಂದು ಯೋಜನೆ ರೂಪಿಸಿದ್ದರು. ತಮ್ಮ ಯೋಜನೆ ಹಾಗೂ ಅಮೃತ್ಪಾಲ್ ಪರಾರಿಯಾದದ್ದು ಹೇಗೆ ಎಂಬುದರ ಕುರಿತು ಹೈಕೋರ್ಟ್ಗೆ ಪಂಜಾಬ್ ಪೊಲೀಸರು ಪ್ರಮಾಣ ಪತ್ರ ಸಲ್ಲಿಸಿದ್ದಾರೆ.
‘ಅಮೃತಸರದ ಖಿಲ್ಚಿಯಾನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ನಾಕಾಬಂದಿಯನ್ನು ಹಾಕಿದ್ದರು. ಅಮೃತ್ಪಾಲ್ ಮತ್ತು ಆತನ ಸಹಚರರು ಮರ್ಸಿಡಿಸ್ ಸೇರಿ ನಾಲ್ಕು ಕಾರುಗಳಲ್ಲಿ ಪ್ರಯಾಣಿಸುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.
‘ನಾಕಾಬಂದಿಯ ಬಳಿ ಕಾರುಗಳನ್ನು ನಿಲ್ಲಿಸುವಂತೆ ಅಮೃತ್ಪಾಲ್ ಅವರಿಗೆ ನಿರ್ದೇಶಿಸಲಾಗಿತ್ತು. ಆದರೆ, ಕಾರುಗಳನ್ನು ನಿಲ್ಲಿಸದ ಅವರು ನಾಕಾಬಂದಿಯನ್ನು ಗುದ್ದಿಕೊಂಡು ಪರಾರಿಯಾದರು’ ಎಂದರು.
‘ತಕ್ಷಣವೇ ಹತ್ತಿರದ ಎಲ್ಲಾ ಪೊಲೀಸ್ ಠಾಣೆಗಳಿಗೆ ಹಾಗೂ ಜಿಲ್ಲಾ ಠಾಣೆಗಳಿಗೆ ವಾಹನಗಳ ಕುರಿತು ಮಾಹಿತಿ ರವಾನಿಸಲಾಯಿತು. ಜಲಂಧರ್ನ ಸಲೇಮಾ ಗ್ರಾಮದ ಸರ್ಕಾರಿ ಶಾಲೆಯೊಂದರ ಬಳಿ ಅಪಾಯಕಾರಿಯಾಗಿ ಕಾರು ಚಲಾಯಿಸಿದ್ದನ್ನು ಪತ್ತೆಹಚ್ಚಲಾಯಿತು. ಅಮೃತ್ಪಾಲ್ ಹಾಗೂ ಅವರ ಸಹಚರರು ಸಾರ್ವಜನಿಕರಿಗೆ ಬೆದರಿಕೆ ಒಡ್ಡುವ ರೀತಿಯಲ್ಲಿ ತಮ್ಮ ಬಳಿ ಇದ್ದ ರೈಫಲ್ಗಳನ್ನು ತೋರಿಸಿದರು. ಅಲ್ಲಿಂದ ಅವರು ಕಾರುಗಳಲ್ಲಿ ನಾಪತ್ತೆಯಾದರು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.