ADVERTISEMENT

ಹೈದರ್‌ಪೋರಾ ದಾಳಿಯಲ್ಲಿ ಸತ್ತವರು ಅಮಾಯಕರಲ್ಲ: ಡಿಜಿಪಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 20:30 IST
Last Updated 26 ನವೆಂಬರ್ 2021, 20:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಮ್ಮು: ಶ್ರೀನಗರದ ಹೈದರ್‌ಪೋರಾದಲ್ಲಿ ನ.15ರಂದು ಭದ್ರತಾ ಪಡೆಗಳ ಎನ್‌ಕೌಂಟರ್‌ಗೆ ಬಲಿಯಾದವರು ಅಮಾಯಕರಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಿಲ್‌ಬಾಗ್‌ ಸಿಂಗ್‌ ತಿಳಿಸಿದ್ದಾರೆ.

ಜಮ್ಮುವಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈದರ್‌ಪೋರಾ ಎನ್‌ಕೌಂಟರ್‌ ಕುರಿತು ಕಾಶ್ಮೀರ ವಲಯ ಪೊಲೀಸರಿಂದ ವಿಶೇಷ ತನಿಖೆ ನಡೆಯುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಪೊಲೀಸ್‌ ವೃತ್ತಿಪರ ಪಡೆಯಾಗಿದ್ದು, ಕಾರ್ಯಾಚರಣೆ ಅರಿವಿಲ್ಲದ ಜನರಿಂದ ನಮ್ಮ ಪೊಲೀಸರು ಪಾಠ ಕಲಿಯುವ ಅಗತ್ಯವಿಲ್ಲ ಎಂದು ಅವರು ತಿರುಗೇಟು ನೀಡಿದ್ದಾರೆ.

ಹೈದರ್‌ಪೋರಾ ಎನ್‌ಕೌಂಟರ್‌ ಕುರಿತು ಎಲ್ಲ ಮಾಹಿತಿಯನ್ನು ಶೀಘ್ರವೇ ಬಹಿರಂಗಪಡಿಸಲಾಗುವುದು. ತನಿಖೆ ಮತ್ತಷ್ಟು ಪ್ರಗತಿಯಾದರೆ ಸತ್ಯಾಂಶ ಬೆಳಕಿಗೆ ಬರಲಿದೆ. ವಿದೇಶಿ ಉಗ್ರರನ್ನು ಬೈಕ್‌ನಲ್ಲಿ ಕರೆದೊಯ್ದು ದಾಳಿ ನಡೆಸಲು ಸೂಕ್ತ ಜಾಗವನ್ನು ತೋರಿಸುತ್ತಿದ್ದವರನ್ನು ಅಮಾಯಕರು ಎಂದು ಹೇಗೆ ಹೇಳುತ್ತಿರಿ ಎಂದು ಅವರು ಪ್ರಶ್ನಿಸಿದ್ದಾರೆ.

ADVERTISEMENT

ಶಸ್ತ್ರಾಸ್ತ್ರಗಳೊಂದಿಗೆ ನಗರದಾದ್ಯಂತ ಸುತ್ತಾಡುತ್ತಿದ್ದ ಪಾಕಿಸ್ತಾನದ ಉಗ್ರನನ್ನು ಹತ್ತಿರದಿಂದಲೇ ಗುರುತಿಸಿದ್ದ ಪೊಲೀಸರು ಗುಂಡಿಟ್ಟು ಕೊಂದಿದ್ದಾರೆ. ಆತನ ಹಿಂದೆ ಉಗ್ರರ ಜಾಲವೇ ಇದ್ದು, ಆತನಿಗೆ ಸಹಕಾರ ನೀಡುತ್ತಿತ್ತು ಎಂದು ಅವರು ತಿಳಿಸಿದ್ದಾರೆ.

ನುಸುಳುಕೋರನ ಹತ್ಯೆ

ಶ್ರೀನಗರ: ರಾಜೋರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಶುಕ್ರವಾರ ಒಳನುಸುಳಲು ಯತ್ನಿಸಿದ ಉಗ್ರನೊಬ್ಬನನ್ನು ಭಾರತೀಯ ಸೇನಾ ಪಡೆ ಹೊಡೆದುರಿಳಿಸಿದೆ.

ಗಡಿ ನಿಯಂತ್ರಣಾ ರೇಖೆಯ ಭಿಂಬರ್‌ ಗಲಿ ವಲಯದಲ್ಲಿ ಒಳನುಸುಳಲು ಯತ್ನಿಸಿದ ಉಗ್ರನನ್ನು ಗುಂಡಿಟ್ಟು ಕೊಲ್ಲಲಾಗಿದ್ದು, ಆತನಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನಾ ಪಡೆ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.