ಕೋಲ್ಕತ್ತಾ: ರಾಜ್ಯ ಮಹಿಳಾ ಆಯೋಗಕ್ಕೆ ಸಲ್ಲಿಕೆಯಾಗಿರುವ 267 ದೂರುಗಳ ಬಗ್ಗೆ ಪಶ್ಚಿಮ ಬಂಗಾಳ ಸರ್ಕಾರಇನ್ನು 15 ದಿನಗಳೊಳಗೆ ಪ್ರತಿಕ್ರಿಯಸಲು ವಿಫಲವಾದರೆ, ಮುಂದಿನ ಕ್ರಮ ಕೈಗೊಳ್ಳಲು ಈ ದೂರುಗಳ ವಿವರಗಳನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸುವುದಾಗಿ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಎಚ್ಚರಿಸಿದ್ದಾರೆ.
ಎರಡು ದಿನಗಳ ಭೇಟಿಗಾಗಿ ರಾಜ್ಯಕ್ಕೆ ಆಗಮಿಸಿರುವ ರೇಖಾ ಶರ್ಮಾ, ಇಬ್ಬರು ಮಹಿಳಾ ಹಕ್ಕುಗಳ ಹೋರಾಟಗಾರರು ಸೇರಿದಂತೆ ರಾಜ್ಯ ಮಹಿಳಾ ಆಯೋಗಕ್ಕೆ ಸಲ್ಲಿಕೆಯಾಗಿರುವ 267 ದೂರುಗಳ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳದಿರುವ ಕುರಿತು ವಿಚಾರಿಸಿದ ನಂತರ ಈ ಎಚ್ಚರಿಕೆ ನೀಡಿದ್ದಾರೆ.
‘ಪಶ್ಚಿಮ ಬಂಗಾಳದ ಆತಂಕಕಾರಿ ಪರಿಸ್ಥಿತಿ ಎಂದರೆ ಪೊಲೀಸರು ದೂರುಗಳ ಬಗ್ಗೆ ಸಮರ್ಪಕವಾಗಿ ಉತ್ತರಿಸುವುದಿಲ್ಲ. ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸ್ ಮಹಾನಿರ್ದೇಶಕರು ಅಥವಾ ಮುಖ್ಯ ಕಾರ್ಯದರ್ಶಿ ನನ್ನನ್ನು ಭೇಟಿಯಾಗುವುದಿಲ್ಲ. ಹೀಗೆ ನಡೆಯುತ್ತಿರುವುದು ಇದೇ ಮೊದಲ ಬಾರಿ ಅಲ್ಲ‘ ಎಂದು ಅವರು ಸುದ್ದಿ ಸಂಸ್ಥೆಗೆ ತಿಳಿಸಿದರು.
‘ಈ ವರ್ಷದ ಎಂಟು ತಿಂಗಳಲ್ಲಿ 260ಕ್ಕೂ ಹೆಚ್ಚು ದೂರುಗಳ ಬಂದಿವೆ. ಆದರೆ, ಈ ಬಗ್ಗೆ ನಮ್ಮ ಕೇಂದ್ರಕ್ಕೆ ಯಾವುದೇ ವರದಿಯನ್ನು ಇಲ್ಲಿವರೆಗೂ ಸಲ್ಲಿಸಿಲ್ಲ‘ ಎಂದು ರೇಖಾ ಆಕ್ಷೇಪ ವ್ಯಕ್ತಪಡಿಸಿದರು.
ಈ ಎಲ್ಲ ದೂರುಗಳ ಕುರಿತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಪತ್ರ ಬರೆಯುತ್ತೇನೆ. 15 ದಿನಗಳೊಳಗೆ ಈ ದೂರುಗಳ ಬಗ್ಗೆ ಅವರಿಂದ ಯಾವುದೇ ಪ್ರತಿಕ್ರಿಯೆಗಳು ಬಾರದಿದ್ದರೆ, ಈ ವಿಷಯವನ್ನು ಗೃಹ ಸಚಿವಾಲಯಕ್ಕೆ ಕಳುಹಿಸುತ್ತೇನೆ‘ ಎಂದು ತಿಳಿಸಿದರು.
‘ಈ ಸರ್ಕಾರಕ್ಕೆ ಈ ಸಮಸ್ಯೆಗಳನ್ನು ಪೂರ್ಣ ನಿಯಂತ್ರಿಸಲು ಸಾಧ್ಯವಾಗದಿದ್ದರೂ, ಈ ದೂರುಗಳ ವಿರುದ್ಧ ಕ್ರಮ ಕೈಗೊಳ್ಳಬಹುದು‘ ಎಂದು ಅವರು ಅಭಿಪ್ರಾಯಪಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.