ADVERTISEMENT

ಐಎಂಎ ವಂಚನೆ ಪ್ರಕರಣ: ಇಬ್ಬರು ಅಧಿಕಾರಿಗಳ ವಿರುದ್ಧ ಚಾರ್ಚ್‌ಶೀಟ್‌

ಪಿಟಿಐ
Published 7 ಸೆಪ್ಟೆಂಬರ್ 2020, 16:19 IST
Last Updated 7 ಸೆಪ್ಟೆಂಬರ್ 2020, 16:19 IST
ಐಎಂಎ ಜ್ಯುವೆಲ್ಸ್‌ 
ಐಎಂಎ ಜ್ಯುವೆಲ್ಸ್‌    

ನವದೆಹಲಿ:ಐಎಂಎ ಕಂಪನಿ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆಕ್ಲೀನ್‌ಚಿಟ್‌ ನೀಡಲುಆರೋಪಿ ಮನ್ಸೂರ್ ಖಾನ್‌ನಿಂದ ಲಂಚ ಪಡೆದ ಆರೋಪದಡಿ ಕರ್ನಾಟಕದ ಇಬ್ಬರು ಅಧಿಕಾರಿಗಳ ವಿರುದ್ಧ ಸಿಬಿಐ ದೋಷಾರೋಪ ಪಟ್ಟಿ ದಾಖಲಿಸಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

₹ 4,000 ಕೋಟಿ ವಂಚನೆ ಪ್ರಕರಣದಲ್ಲಿಬೆಂಗಳೂರು ಉತ್ತರ ತಾಲ್ಲೂಕು ಉಪವಿಭಾಗಾಧಿಕಾರಿಯಾಗಿದ್ದ ಎಲ್‌.ಸಿ.ನಾಗರಾಜ್‌ ಹಾಗೂ ಗ್ರಾಮ ಲೆಕ್ಕಿಗ ಮಂಜುನಾಥ್‌ ಎನ್‌. ವಿರುದ್ಧ ತನಿಖೆಗೆ ರಾಜ್ಯ ಸರ್ಕಾರದ ಒಪ್ಪಿಗೆ ಪಡೆದ ಬಳಿಕ ಸಿಬಿಐ ಈ ದೋಷಾರೋಪ ಪಟ್ಟಿ ದಾಖಲಿಸಿದೆ. ಖಾನ್‌ನಿಂದ ನಾಗರಾಜ್‌ ₹4.5 ಕೋಟಿ ಹಾಗೂ ಮಧ್ಯವರ್ತಿಯಾಗಿದ್ದ ಮಂಜುನಾಥ್‌ ₹10 ಲಕ್ಷ ಲಂಚ ಪಡೆದಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಕರಣದ ಕುರಿತ ಎಫ್‌ಐಆರ್‌ನಲ್ಲಿಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಬಿ.ಎಂ.ವಿಜಯ್‌ ಶಂಕರ್‌ ಅವರ ಹೆಸರಿದ್ದರೂ, ಅವರು ಮೃತಪಟ್ಟಿರುವ ಕಾರಣದೋಷಾರೋಪ ಪಟ್ಟಿಯಲ್ಲಿ ಅವರ ಹೆಸರು ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

‘ಐಎಂಎ ಜ್ಯುವೆಲ್ಸ್‌ನ ಚಟುವಟಿಕೆಗಳ ಬಗ್ಗೆ ದೂರುಗಳು ಕೇಳಿಬಂದ ಸಂದರ್ಭದಲ್ಲಿ ತನಿಖೆ ನಡೆಸಲು ಸರ್ಕಾರವು ಜಿಲ್ಲಾ ಆಡಳಿತಕ್ಕೆ ಸೂಚಿಸಿತ್ತು. ಈ ಸಂದರ್ಭದಲ್ಲಿ ಐಎಂಎ ಬಂಡವಾಳ ಸಂಸ್ಥೆಯಲ್ಲಿ ಯಾವುದೇ ಅವ್ಯವಹಾರಗಳಿಲ್ಲ ಎಂದು ಎಲ್‌.ಸಿ.ನಾಗರಾಜ್ ವರದಿ ತಯಾರಿಸಿ, ಖಾನ್‌ಗೆ ಕ್ಲೀನ್‌ಚಿಟ್‌ ನೀಡಿದ್ದರು. ಈ ವರದಿಯನ್ನು ಪರಿಶೀಲಿಸದೆಯೇ ಶಂಕರ್‌ ಅವರು ಅದನ್ನು ಸರ್ಕಾರಕ್ಕೆ ಸಲ್ಲಿಸಿದ್ದರು’ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.