ಸಾಂದರ್ಭಿಕ ಚಿತ್ರ
ಕೋಲ್ಕತ್ತ: ಕಲ್ಕತ್ತ ಹೈಕೋರ್ಟ್ನ ನ್ಯಾಯಮೂರ್ತಿ ರಂಜನ್ ದಾಶ್ ಅವರು, ಸೋಮವಾರ ನಿವೃತ್ತಿ ನಂತರದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾಡಿದ ವಿದಾಯ ಭಾಷಣದಲ್ಲಿ ನಾನು ಆರ್ಎಸ್ಎಸ್ ಕಾರ್ಯಕರ್ತ ಎಂದು ಹೇಳಿಕೊಂಡರು.
ನ್ಯಾಯಮೂರ್ತಿಗಳು, ವಕೀಲರ ಸಂಘದ ಸದಸ್ಯರ ಸಮ್ಮುಖದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಮತ್ತೆ ಕರೆ ಬಂದರೆ ನಾನು ಆರ್ಎಸ್ಎಸ್ ಸೇವೆಗೆ ಮರಳಲು, ಯಾವುದೇ ಹೊಣೆ ನಿಭಾಯಿಸಲು ಸಿದ್ಧ’ ಎಂದರು.
ಈ ಮಾತು ಕೆಲವರಿಗೆ ಇಷ್ಟವಾಗದಿರಬಹುದು. ಆದರೆ, ನಾನು ಆರ್ಎಸ್ಎಸ್ನಲ್ಲಿ ಇದ್ದೆ. ಮತ್ತು ಈಗಲೂ ಆ ಸಂಘಟನೆಯ ಸದಸ್ಯ ಎಂಬುದನ್ನು ಒಪ್ಪಿಕೊಳ್ಳಲೇಬೇಕು ಎಂದು ಹೇಳಿದರು.
ನ್ಯಾಯಮೂರ್ತಿ ದಾಶ್ ಅವರು ಒಡಿಶಾ ಹೈಕೋರ್ಟ್ನಿಂದ ಇಲ್ಲಿಗೆ ವರ್ಗಾವಣೆಯಾಗಿದ್ದರು. ಕಲ್ಕತ್ತ ಹೈಕೋರ್ಟ್ನಲ್ಲಿ ನ್ಯಾಯಮೂರ್ತಿಯಾಗಿ 14 ವರ್ಷ ಕಾರ್ಯನಿರ್ವಹಿಸಿದ್ದರು.
‘ಬಾಲ್ಯದಿಂದಲೂ ನಾನು ಆರ್ಎಸ್ಎಸ್ ಜೊತೆಗೆ ಗುರುತಿಸಿಕೊಂಡಿದ್ದೆನೆ. ಅಲ್ಲಿ ನಾನು ಧೈರ್ಯವನ್ನು ಒಗ್ಗೂಡಿಸಿಕೊಂಡಿದ್ದೇನೆ. ಎಲ್ಲರನ್ನು ಸಮಾನವಾಗಿ ಕಾಣುವ, ಮುಖ್ಯವಾಗಿ ದೇಶಭಕ್ತಿ ಹಾಗೂ ಕೆಲಸದಲ್ಲಿ ಬದ್ಧತೆಯನ್ನು ಕಲಿತಿದ್ದೇನೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.