ADVERTISEMENT

ಕೊರೊನಾ ವೈರಸ್‌ | ಭಾರತ ಕಠಿಣ ಪರಿಸ್ಥಿತಿ ಎದುರಿಸುತ್ತಿದೆ: ಸಚಿವ ಜೈಶಂಕರ್‌

ಕೊರೊನಾ ವೈರಸ್‌ ಸಾಂಕ್ರಾಮಿಕ ಕಾಯಿಲೆ ತಂದ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 20 ಮೇ 2021, 13:14 IST
Last Updated 20 ಮೇ 2021, 13:14 IST
ಎಸ್‌. ಜೈಶಂಕರ್‌
ಎಸ್‌. ಜೈಶಂಕರ್‌   

ನವದೆಹಲಿ(ಪಿಟಿಐ): ‘ಕೋವಿಡ್‌–19 ಸಂದರ್ಭದಲ್ಲಿ ಭಾರತ ಸದ್ಯ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ತಿಳಿಸಿದ್ದಾರೆ.

ನಿಕ್ಕಿ ಗುರುವಾರ ಆಯೋಜಿಸಿದ್ದ ‘ಏಷ್ಯಾದ ಭವಿಷ್ಯ’ ಕುರಿತು ಆನ್‌ಲೈನ್‌ ವಿಚಾರಸಂಕಿರಣದಲ್ಲಿ ಮಾತನಾಡಿದ ಅವರು, ‘ಕೋವಿಡ್‌–19 ಪರಿಸ್ಥಿತಿಯನ್ನು ಒಂದು ಬಾರಿಯ ಸಮಸ್ಯೆ ಎಂದು ಪರಿಗಣಿಸಬಾರದು. ಇದು ಪದೇ ಪದೇ ಎದುರಾಗುವ ಸವಾಲು ಎನ್ನುವುದನ್ನು ಅರಿತುಕೊಳ್ಳಬೇಕು’ ಎಂದು ಹೇಳಿದರು.

‘ಜಗತ್ತಿನ ಗಮನವೂ ಸಾರ್ವಜನಿಕ ಆರೋಗ್ಯದ ಮೇಲೆಯೇ ಗಮನಹರಿಸಿದೆ. ಕಳೆದ ಒಂದೂವರೆ ವರ್ಷದಿಂದ ಕೋವಿಡ್‌–19 ಸಾಂಕ್ರಾಮಿಕ ಕಾಯಿಲೆ ಹಲವು ರೀತಿಯ ಸಮಸ್ಯೆಗಳು ಮತ್ತು ಸವಾಲುಗಳನ್ನು ಸೃಷ್ಟಿಸಿದೆ. ಈ ಕಾಯಿಲೆ ನಿಯಂತ್ರಿಸಲು ಅಂತರರಾಷ್ಟ್ರೀಯ ಸಹಕಾರ ಅಗತ್ಯ’ ಎಂದು ಪ್ರತಿಪಾದಿಸಿದರು.

ADVERTISEMENT

‘ಆರೋಗ್ಯ ಮತ್ತು ವೈದ್ಯಕೀಯ ಅಗತ್ಯಗಳನ್ನು ಪರಿಣಾಮಕಾರಿಯಾಗಿ ನೀಗಿಸುವುದು ಜಾಗತಿಕಮಟ್ಟದಲ್ಲಿ ನಡೆಯಬೇಕು. ಕೇವಲ ಒಂದೇ ರಾಷ್ಟ್ರದಿಂದ ಎಲ್ಲ ಬೇಡಿಕೆಗಳನ್ನು ಪೂರೈಸಲು ಸಾದ್ಯವಿಲ್ಲ’ ಎಂದು ಹೇಳಿದರು.

’ಕೋವಿಡ್‌–19ನಿಂದ ವಿತರಣೆ ಸರಪಳಿ, ಜಾಗತಿಕ ಆಡಳಿತ, ಸಾಮಾಜಿಕ ಜವಾಬ್ದಾರಿ ಮತ್ತು ನೀತಿ ಸಂಹಿತೆಯ ವಿಷಯಗಳು ಚರ್ಚೆಗೆ ಮುನ್ನೆಲೆಗೆ ಬಂದಿವೆ. ಹೀಗಾಗಿ, ಪ್ರಸ್ತುತ ಜಗತ್ತಿನ ಪರಿಸ್ಥಿತಿಯನ್ನು ಅವಲೋಕಿಸಿ ಸವಾಲುಗಳನ್ನು ಎದುರಿಸುವ ಮೂಲಕ ನಾಳಿನ ಜಗತ್ತಿಗಾಗಿ ಸಿದ್ಧತೆಗಳನ್ನು ಕೈಗೊಳ್ಳಬೇಕಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.