ನವದೆಹಲಿ: ಭಾರತದಾಚೆಗೆ ಭೂಪ್ರದೇಶವನ್ನು ವಿಸ್ತರಿಸುವ ಯಾವುದೇ ಬಯಕೆ ನಾವು ಹೊಂದಿಲ್ಲ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ತಿಳಿಸಿದ್ದಾರೆ.
‘ಭಾರತ–ಪೆಸಿಫಿಕ್ ಭಾಗದಲ್ಲಿ ಭೌಗೋಳಿಕ ರಾಜಕೀಯ ಮತ್ತು ಸವಾಲುಗಳು’ ಕುರಿತಾದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಬಾಹ್ಯ ಮತ್ತು ಆಂತರಿಕ ಭದ್ರತೆಯ ಪರಿಸರ ನಿರ್ಮಾಣದ ಜೊತೆಗೆಯಾವುದೇ ತಡೆಯಿಲ್ಲದ ಆರ್ಥಿಕ ಅಭಿವೃದ್ಧಿ ಹಾಗೂ ಸಾಮಾಜಿಕ ರಾಜಕೀಯ ಅಭಿವೃದ್ಧಿ ಸಾಧಿಸುವುದು ಭಾರತದ ಆದ್ಯತೆಯಾಗಿದೆ’ ಎಂದು ತಿಳಿಸಿದರು.
‘ನಮ್ಮ ಭದ್ರತಾ ನೀತಿ ಎರಡು ಪ್ರಮುಖ ಮೂಲಾಧಾರಗಳನ್ನು ಹೊಂದಿದೆ. ನಾವು ಎಂದಿಗೂ ದೇಶದ ಆಚೆಗೆ ಗಡಿವಿಸ್ತರಿಸುವ ಗುರಿ ಹೊಂದಿಲ್ಲ ಹಾಗೂ ನಮ್ಮ ಸಿದ್ಧಾಂತಗಳನ್ನು ಬೇರೆಯವರ ಮೇಲೆ ಹೇರಲ್ಲ’ ಎಂದರು.
‘ಪೂರ್ವ ಏಷ್ಯಾ ಹಾಗೂ ದಕ್ಷಿಣ ಚೀನಾ ಸಮುದ್ರದ ವ್ಯಾಪ್ತಿ ದೇಶದ ಸೌರ್ವಭೌಮತೆಗೆ ಅತೀ ದೊಡ್ಡ ಸವಾಲಾಗಿದೆ. ಇದರ ಗಡಿವಿವಾದವು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಪಾಯ ಉಂಟುಮಾಡಿದೆ’ ಎಂದು ತಿಳಿಸಿದರು.
ವಿಶೇಷ ಉಪನ್ಯಾಸ ನೀಡಿದ ಆಸ್ಟ್ರೇಲಿಯಾದ ಭಾರತದ ರಾಯಭಾರಿ ಹರೀಂದರ್ ಸಿಧು, ‘ಮಲಬಾರ್ ನೌಕಾ ಕವಾಯಿತಿನಲ್ಲಿ ಭಾಗವಹಿಸಲು ಆಸ್ಟ್ರೇಲಿಯಾ ಕೂಡ ಆಸಕ್ತಿ ವಹಿಸಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.